ನಿಮ್ಮ ಯೋಗಕ್ಷೇಮದ ಹಿಂದೆ ಸ್ನೇಹಿತರ ಗುಣಮಟ್ಟದ ಪಾತ್ರ

ಮನುಷ್ಯ ಸಂಘಜೀವಿ ಅನ್ನುವುದು ಗೊತ್ತೇ ಇದೆ. ದೈಹಿಕ ಹಾಗೂ ಭಾವನಾತ್ಮಕ ಕಾರಣಗಳಿಗೆ ಒಬ್ಬರು ಇನ್ನೊಬ್ಬರನ್ನು ಅವಲಂಭಿಸುವುದು ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ನಿಮ್ಮ ಸ್ನೇಹ ಸಂಬಂಧಗಳು ಹೇಗಿವೆ? ನಿಮ್ಮ ಸುಖ- ದುಃಖವನ್ನು ಹಂಚಿಕೊಳ್ಳಲು ನಿಮ್ಮ ಜತೆಗೆ ಯಾರಾದರೂ ಇದ್ದಾರೆಯೇ? ಅವರು ಕೇವಲ ನಿಮ್ಮ ಸಂತೋಷದಲ್ಲಿದ್ದಾಗ ಮಾತ್ರ ಭಾಗಿಯಾಗುತ್ತಾರಾ? ಅಥವಾ ಕಷ್ಟಕಾಲದಲ್ಲೂ ಜತೆಗಿರುತ್ತಾರಾ? ನಿಮ್ಮಿಬ್ಬರ ಮಧ್ಯೆ ನಂಬಿಕೆ ಎಷ್ಟಿದೆ? ಮುಚ್ಚುಮರೆಯಿಲ್ಲದೇ ಎಲ್ಲ ವಿಚಾರಗಳನ್ನೂ ಹಂಚಿಕೊಳ್ಳುತ್ತೀರಾ? ಈ ಎಲ್ಲ ಪ್ರಶ್ನೆಗಳ ಉತ್ತರದಲ್ಲಿ ನಿಮ್ಮ ಕ್ಷೇಮ, ಜೀವಂತಿಕೆ ಮತ್ತು ದೀರ್ಘಾಯುಷ್ಯದ ವಿಚಾರದಲ್ಲೂ ಪರಿಣಾಮ ಬೀರುತ್ತದೆ ಎಂದು ಮನಃಶಾಸ್ತ್ರೀಯವಾಗಿ ಹಾಗೂ ವೈದ್ಯಕೀಯವಾಗಿ ಇದು ಸಾಬೀತಾಗಿದೆ.

ಬಿಹೇವಿಯರಲ್‌ ಮೆಡಿಸಿನ್ ನಿಕಟ ಸಾಮಾಜಿಕ ಸಂಬಂಧಗಳು ಹಾಗೂ ಕ್ಷೇಮದ ನಡುವಿನ ಸಂಪರ್ಕವನ್ನು ಪುನರುಚ್ಚರಿಸುತ್ತದೆ. ಅರಿಸ್ಟಾಟಲ್ ಈ ಸಮಸ್ಯೆಯನ್ನು ಸಹಸ್ರಮಾನದ ಹಿಂದೆಯೇ ವಿಶ್ಲೇಷಿಸಿದ್ದರು. ನೈತಿಕ ಸಂಹಿತೆ ಹಾಗೂ ಚಾರಿತ್ರ್ಯದ ಸದ್ಗುಣಗಳು, ನಿಕೊಮೆಚಿಯನ್ ಎಥಿಕ್ಸ್ ಎಂಬ ಕೃತಿಯಲ್ಲಿ ಈ ಸಂಬಂಧದ ಮಹತ್ವ ಹಾಗೂ ಪರಿಣಾಮಗಳನ್ನು ಸುಧೀರ್ಘವಾಗಿ ವಿವರಿಸಿದ್ದಾರೆ.

ಅರಿಸ್ಟಾಟಲ್ ಮೂರು ಬಗೆಯ ಗೆಳೆತನವನ್ನು ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಅವುಗಳೆಂದರೆ:

  • ಏಕತೆ, ಸಂತಸ ಹಾಗೂ ಸದ್ಗುಣಗಳ ಹಿನ್ನೆಲೆಯ ಸ್ನೇಹ, ಇಬ್ಬರಿಗೂ ಲಾಭದಾಕರವಾದ ಸಂಬಂಧ.  
  •  ಇನ್ನೊಂದು ಹಣ ಅಥವಾ ಅಧಿಕಾರದ ಹಿನ್ನೆಲೆಯ ಸಂಬಂಧ.
  • ಮನೋರಂಜನೆಯ ಉದ್ದೇಶದ ಗೆಳೆತನ: ಅಂದರೆ ಕ್ರೀಡಾಕೂಟಗಳನ್ನು ವೀಕ್ಷಿಸುವುದು ಅಥವಾ ಸಂಗೀತ ಕಚೇರಿಗಳನ್ನು ಜತೆಗೆ ಆಸ್ವಾದಿಸುವುದು.

ಅರಿಸ್ಟಾಟಲ್ ಪ್ರಕಾರ ಸದ್ಗುಣಗಳ ಹಿನ್ನೆಲೆಯ ಸ್ನೇಹ, ಮೂರೂ ಬಗೆಯ ಗೆಳೆತನದಲ್ಲಿ ಅತ್ಯಂತ ಶ್ರೇಷ್ಠ. ಇದರಲ್ಲಿ ಭಾವನಾತ್ಮಕ ಹಾಗೂ ಮಮತೆ ಪೂರ್ವಕ ಕಾಳಜಿ ಇರುತ್ತದೆ. ದೈನಂದಿನ ಜೀವನದಲ್ಲಿ ಮಾನವ ಕಲ್ಯಾಣದಲ್ಲಿ ಸದ್ಗುಣ ಆಧರಿತ ಸ್ನೇಹದ ಪ್ರಭಾವ ದಟ್ಟವಾಗಿದೆ ಎನ್ನುವುದು ಅವರ ಅಭಿಮತ.

ಮಧ್ಯಕಾಲೀನ ಯುಗದಲ್ಲಿ, ಅರಿಸ್ಟಾಟಲ್ ದೃಷ್ಟಿಕೋನವನ್ನು ಪ್ರಭಾವಿ ರಬ್ಬಾನಿಕ್ ಚಿಂತಕ ಹಾಗೂ ವೈದ್ಯ ಮೊಸೆಸ್ ಮೈಮೊಂಡೆಸ್ ಧೀರ್ಘವಾಗಿ ವಿಸ್ತರಿಸಿದರು. ಉದಾಹರಣೆಗೆ ಮೈಮೊಂಡೆಸ್ ಅವರ ಗೈಡ್ ಫಾರ್ ದ ಪ್ರೆಪ್ಲೆಕ್ಸ್ಡ್ ಕೃತಿಯಲ್ಲಿ, "ಜೀವನವಿಡೀ ಗೆಳೆತನ ಬೇಕು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಒಬ್ಬ ವ್ಯಕ್ತಿಯ ಆರೋಗ್ಯ ಉತ್ತಮವಾಗಿದ್ದಾಗ ಮತ್ತು ಆತ ಸಮೃದ್ಧಿಯಿಂದ ಇದ್ದಾಗ, ಆತನ ಸ್ನೇಹಿತರ ಜತೆ ಮೋಜಿನಿಂದ ಇರುತ್ತಾನೆ, ಆದರೆ ಕಷ್ಟದ ಕಾಲದಲ್ಲಿ, ಆತನಿಗೆ ಸ್ನೇಹಿತರ ಅಗತ್ಯ ಇರುತ್ತದೆ, ವೃದ್ಧಾಪ್ಯದಲ್ಲಿ ಆತನ ದೇಹ ಅಶಕ್ತವಾದಾಗ, ಆತನಿಗೆ ಅವರು ಸಹಾಯ ಮಾಡುತ್ತಾರೆ" ಎಂದು ವಿವರಿಸಿದ್ದಾರೆ.

ಮೈಮೆಂಡಿಸ್ ಉತ್ತಮ ಚಿಕಿತ್ಸಕ ಎನಿಸಿಕೊಂಡಿದ್ದರೂ ಅವರ ಕಾಲದಲ್ಲಿ ಯಾವುದೇ ವೈದ್ಯಕೀಯ ತಜ್ಞ ಕ್ಷೇತ್ರಗಳು ಹುಟ್ಟಿಕೊಂಡಿರಲಿಲ್ಲ. 19 ನೇ ಶತಮಾನದ ಕೊನೆಯವರೆಗೂ ವೈಜ್ಞಾನಿಕವಾಗಿ ವ್ಯಕ್ತಿತ್ವವನ್ನು ಅಧ್ಯಯನ ಮಾಡುವ ವಿಧಾನ ಆರಂಭವಾಗಲಿಲ್ಲ. ಅಂತೆಯೇ ಸಿಗ್ಮಂಡ್ ಫ್ರಾಯ್ಡ್‌ನಂಥ ಚಿಂತಕರಿಂದ ಸಂಶೋಧನಾತಾತ್ಮಕವಾಗಿ ಈ ಅಧ್ಯಯನ ನಡೆಯಲಿಲ್ಲ.

ಕುತೂಹಲದ ಅಂಶವೆಂದರೆ, ಸಿಗ್ಮಂಡ್ ಫ್ರಾಯ್ಡ್ ಅತ್ಯುತ್ತಮ ಬರಹಗಾರರಾಗಿದ್ದರು, ಆದರೆ ಪುರುಷರು ಹಾಗೂ ಮಹಿಳೆಯರಿಗೆ ಸ್ನೇಹಸಂಬಂಧ ಬೀರುವ ಧನಾತ್ಮಕ ಪರಿಣಾಮದ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. ಅವರ ಅತ್ಯಂತ ಪ್ರಸಿದ್ಧ ಥಿಯರಿ ಆಫ್ ನ್ಯುರೋಸಿಸ್‌ನಲ್ಲಿ ಅವರು ಬಾಲ್ಯದಲ್ಲಿ ಹೇಗೆ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ ಎನ್ನುವುದನ್ನು ವಿವರಿಸಿಲ್ಲ.

ಸಿಗ್ಮಂಡ್ ಫ್ರಾಯ್ಡ್ ಸ್ನೇಹದ ವಿಷಯವನ್ನು ನಿರ್ಲಕ್ಷಿಸಿದ್ದರೂ, ಅವರ ಸಹೋದ್ಯೋಗಿ ಆಲ್ಫ್ರೆಡ್ ಅಡ್ಲೆರ್ ಈ ವಿಷಯವನ್ನು ವಿಸ್ತೃತವಾಗಿ ವಿವರಿಸಿದ್ದಾರೆ. ಮಾನವ ಆಕ್ರಮಣದ ಭೀಕರತೆಗೆ ಸಾಕ್ಷಿಯಾದ ಬಳಿಕ, ಮೊದಲನೇ ಮಹಾಯುದ್ಧದ ವೇಳೆ ಆಸ್ಟ್ರೇಲಿಯನ್ ಸೇನೆಯ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅಡ್ಲೆರ್, ಅತ್ಯಂತ ಪ್ರಭಾವಿ ಸಾಮಾಜಿಕ ಆಲೋಚನೆ ಎಂಬ ಹೊಸ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಮಾನವರಿಗೆ ಕಾಳಜಿ ಮತ್ತು ಪ್ರೀತಿಯ ಜನ್ಮದತ್ತ ಸಾಮರ್ಥ್ಯ ಇರುತ್ತದೆ. ಆದರೆ ಬಾಲ್ಯದಲ್ಲಿ ಕುಟುಂಬದ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಇದನ್ನು ಬಲಗೊಳಿಸದಿದ್ದರೆ, ಅದು ಆತನ ಪ್ರೌಢಾವಸ್ಥೆಯ ವೇಳೆಗೆ ದುರ್ಬಲವಾಗುತ್ತದೆ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು.

ಮಕ್ಕಳು ಹಾಗೂ ಪ್ರೌಢಾವಸ್ಥೆಯವರಲ್ಲಿ ಸಾಮಾಜಿಕ ಕಳಕಳಿಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ವಿಷಯದ ಬಗೆಗಿನ ಬರಹದ ಮೂಲಕ ಅವರು ವಿಶ್ವ ಖ್ಯಾತಿ ಗಳಿಸಿದರು. ವ್ಯಕ್ತಿತ್ವದ ರೋಗಲಕ್ಷಣ ಪತ್ತೆ ಕುರಿತ ಬೋಧನೆಯಲ್ಲಿ ಅವರು ಮಕ್ಕಳ ಬಾಲ್ಯದ ಭಾವನಾತ್ಮಕ ಕ್ಷೇಮದಲ್ಲಿ ಸ್ನೇಹಿತರ ಅಸ್ತಿತ್ವ ಅತ್ಯಂತ ಸೂಕ್ತ ಸೂಚಕ ಎಂದು ಅವರು ಪ್ರತಿಪಾದಿಸಿದ್ದರು. ಇವರು ತಮ್ಮ ವೈದ್ಯಕೀಯ ಅನುಭವದಿಂದ ಈ ವಾದ ಮಂಡಿಸಿದ್ದರೇ ವಿನಃ ಸಂಶೋಧನಾ ಮಾಹಿತಿಯ ಅಂಕಿ ಅಂಶಗಳಿಂದಲ್ಲ.

ಸ್ನೇಹಿತರಿಲ್ಲದ ಯುವಕರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅತ್ಯಧಿಕ ಎಂದು ಎಚ್ಚರಿಸಿದ್ದಾರೆ. ಈ ಕಾರಣದಿಂದ ಮಕ್ಕಳಿಗೆ ಸಾಮಾಜಿಕ ಕೌಶಲಗಳನ್ನು ಮನವರಿಕೆ ಮಾಡಿಕೊಡುವಲ್ಲಿ ವೃತ್ತಿಪರರ ಹಸ್ತಕ್ಷೇಪ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದರು. ಮನಃಶಾಸ್ತ್ರದಲ್ಲಿ ಒಂದು ಹೊಸಬಗೆಯ ಪರಿಕಲ್ಪನೆ ಅಥವಾ ವಿಶೇಷ ಜ್ಞಾನಶಾಖೆ "ಧನಾತ್ಮಕ ಮನಃಶಾಸ್ತ್ರ" ರೂಪುಗೊಂಡದ್ದು ಅಡ್ಲೇರ್ ಕಾಲದಲ್ಲಿ. ಅವರ ಖ್ಯಾತ "ಫೋಸ್ಟರಿಂಗ್ ಸೋಷಿಯಲ್ ಫೀಲಿಂಗ್ಸ್ ಥ್ರೂ ಫ್ಯಾಮಿಲಿ ಥೆರಪಿ ಅಂಡ್ ಸ್ಕೂಲ್ ಗೈಡನ್ಸ್" ಎಂಬ ಕೃತಿಯಲ್ಲಿ ಈ ಕುರಿತ ಸ್ಪಷ್ಟ ಉಲ್ಲೇಖಗಳು ಸಿಗುತ್ತವೆ.

ಸ್ನೇಹ ಮತ್ತು ನಡವಳಿಕೆ ಔಷಧಿ
1970ರ ದಶಕದಲ್ಲಿ ನಡವಳಿಕೆ ಚಿಕಿತ್ಸಾ ಪದ್ಧತಿ ಅಥವಾ ಔಷಧಿ ಪದ್ಧತಿ ಆರಂಭವಾದ ಬಳಿಕ, ಸಂಶೋಧಕರು ಸಾಮಾಜಿಕ ಸಂಬಂಧಗಳ ಬಗೆಗೆ ನಿಕಟ ಅಧ್ಯಯನ ನಡೆಸಿದ್ದಾರೆ. ಈ ಕ್ಷೇತ್ರದ ಹುಟ್ಟಿನಿಂದಲೇ ಸಂಶೋಧಕರು, ಭಾವನಾತ್ಮಕ ಬೆಂಬಲ ಹಾಗೂ ಸಾಧನಾ ಬೆಂಬಲದ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದರು. ಸಾಧನಾ ಸಹಾಯದಲ್ಲಿ ಮೇಲ್ನೊಟಕ್ಕೆ ಕಂಡುಬರುವ ಹಣ, ಆಹಾರ, ಅಡುಗೆ ಹಾಗೂ ಮನೆಸ್ವಚ್ಛತೆಯಂಥ ವಿಧಾನಗಳು ಸೇರುತ್ತವೆ. ಆದರೆ ಭಾವನಾತ್ಮಕ ಬೆಂಬಲದಲ್ಲಿ ಕಣ್ಣಿಗೆ ಗೋಚರಿಸದ ಬೆಂಬಲಗಳಾದ ಸಹಾನುಭೂತಿ, ಸಲಹೆಯಂಥ ಆಂಶಗಳು ಸೇರುತ್ತವೆ. ನಂತರದ ದಿನಗಳಲ್ಲಿ ಸಂಶೋಧಕರು ಹೆಚ್ಚು ಹೆಚ್ಚು ಸಾಮಾಜಿಕ ಸಹಾಯದ ನಿರ್ದಿಷ್ಟ ಆಯಾಮಗಳ ಬಗ್ಗೆ ದೃಷ್ಟಿ ಹರಿಸಿದರು. ಜತೆಗೆ ವಿಶ್ವಾಸಾರ್ಹ ಸಂಬಂಧದ ಅಗತ್ಯವನ್ನು ಪ್ರತಿಪಾದಿಸಿದರು. ವೈಯಕ್ತಿಕ ಅಂಶಗಳನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳುವ ಕೆಲ ವ್ಯಕ್ತಿಗಳನ್ನು ಅತ್ಯಂತ ವಿಶ್ವಾಸದ ಸಂಬಂಧ ಎಂದು ಪರಿಗಣಿಸುತ್ತೇವೆ.

ಬ್ರಿಂಗಮ್ ಯಂಗ್ ವಿಶ್ವವಿದ್ಯಾನಿಲಯದ ಡಾ.ಜುಲಿಯನ್ ಹಾಲ್ಟ್‌ಲನ್‌ಸ್ಟೆಡ್   ಹಾಗೂ ಅವರ ಸಹೋದ್ಯೋಗಿಗಳು ತಮ್ಮ ಹೃದಯ ಸಂಬಂಧಿ ಕಾಯಿಲೆಗಳ ಪರಾಮರ್ಶೆ ಹಾಗೂ ಮನಃಶಾಸ್ತ್ರೀಯ ಸಾಮಾಜಿಕ ಅಂಶಗಳು ಎಂಬ ಕೃತಿಯಲ್ಲಿ, "ಕೆಲ ನಿರ್ದಿಷ್ಟ ಸಂಬಂಧಗಳು ಇತರ ಸಂಬಂಧಗಳಿಗಿಂತ ಮಹತ್ವದ್ದಾಗಬಹುದು. ಒಂದು ನಿರ್ದಿಷ್ಟ ಸಂಬಂಧದಲ್ಲಿ ಪರಸ್ಪರ ಗಾಢವಾದ ಸಂಬಂಧದ ಪ್ರವೃತ್ತಿ ಮತ್ತೂ ಮಹತ್ವದ್ಧಾಗುತ್ತದೆ. ಇದು ನಮ್ಮ ತಿಳಿವಳಿಕೆಗೆ ಕೊಡುಗೆ ನೀಡುವ ಅಂಶವಾಗುತ್ತದೆ" ಎಂದು ವಿವರಿಸಿದ್ದಾರೆ.

ಕಳೆದ 30 ವರ್ಷಗಳಲ್ಲಿ ನಡವಳಿಕೆ ಸಂಶೋಧನೆಗಳು ವಿಶ್ವಾಸದ ಅಸ್ತಿತ್ವ ಮತ್ತು ವೈಯಕ್ತಿಕ ಕ್ಷೇಮದ ನಡುವಿನ ಸಂಬಂಧವನ್ನು ಖಚಿತಪಡಿಸಿವೆ. ಈ ನಿಟ್ಟಿನಲ್ಲಿ ವಿಸ್ತೃತ ಅಧ್ಯಯನಗಳೂ ನಡೆದಿವೆ. ಅಮೆರಿಕದ ಹದಿಹರೆಯದವರಲ್ಲಿ ಮಾದಕ ವ್ಯಸನ ಹಾಗೂ ಖಿನ್ನತೆಯಿಂದ ಹಿಡಿದು, ಮೆಕ್ಸಿಕೋದ ಯುವಕರಲ್ಲಿ ಕಂಡುಬರುವ ನಿರೋಧಕ ಆರೋಗ್ಯ ವ್ಯವಸ್ಥೆ ವರೆಗೂ ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳಿಂದ ಕಂಡುಬಂದ ಒಂದು ಪ್ರಮುಖವಾದ ಅಂಶವೆಂದರೆ, ವಿಶ್ವಾಸಾರ್ಹ ಸ್ನೇಹಿತ ಇಲ್ಲದ ವ್ಯಕ್ತಿಗಳು ಎಲ್ಲ ಅಪಾಯಕಾರಿ ಹಾಗೂ ಸ್ವಯಂ ವಿನಾಶದ ನಡವಳಿಕೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಅಧ್ಯಯನಗಳಿಂದ ಮತ್ತೂ ತಿಳಿದುಬರುವಂತೆ, ಉತ್ತಮ ಹಾಗೂ ವಿಶ್ವಾಸಾರ್ಹ ಸ್ನೇಹಿತರನ್ನು ಹೊಂದಿರುವ ವ್ಯಕ್ತಿಗೆ ಸಮಗ್ರ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ. ಹಾಗೂ ಅವರು ತೀವ್ರತರದ ವೈದ್ಯಕೀಯ ಹಾಗೂ ಮಾನಸಿಕ ಅಸ್ವಸ್ಥತೆಗೆ ತುತ್ತಾಗುವ ಸಾಧ್ಯತೆ ತೀರಾ ಕಡಿಮೆ. ಇಂಥ ವ್ಯಕ್ತಿಗಳಿಗೆ ಹೃದ್ರೋಗ, ಹೈಪರ್ ಟೆನ್ಷನ್ ಹಾಗೂ ಆಸ್ತಮಾದಂಥ ಕಾಯಿಲೆ ಬಾಧಿಸದು. ಇವರಿಗೆ ಮನಃಶಾಸ್ತ್ರೀಯವಾಗಿ ಕೂಡಾ ಹೆಚ್ಚಿನ ದೃಢತೆ ಇದ್ದು, ಖಿನ್ನತೆಗೆ ಒಳಗಾಗುವ ಸಾಧ್ಯತೆ ತೀರಾ ಕಡಿಮೆ. ಬ್ರಿಟನ್‌ನಲ್ಲಿ ನಡೆದ ಬೊಜ್ಜು ಹಾಗೂ ಕಾರ್ಯಚಟುವಟಿಕೆ ಆರೋಗ್ಯ ಕುರಿತ ಒಂದು ಅಧ್ಯಯನದಲ್ಲಿ ಡಾ.ಪಾಲ್ ಸರ್ಟೀಸ್ ಹಾಗೂ ಸಹೋದ್ಯೋಗಿಗಳು, ಒಬ್ಬ ವಿಶ್ವಾಸಾರ್ಹ ಸ್ನೇಹಿತನನ್ನು ಹೊಂದಿರುವ ಮಹಿಳೆಯ ಆಯಸ್ಸು ಐದು ವರ್ಷದಷ್ಟು ಹಾಗೂ ಪುರುಷನ ಆಯಸ್ಸು ನಾಲ್ಕು ವರ್ಷದಷ್ಟು ಹೆಚ್ಚುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ನಿರ್ದಿಷ್ಟವಾಗಿ ನಮ್ಮ ಸ್ನೇಹ ಅಥವಾ ಗೆಳೆತನ ಹೇಗೆ ನಮ್ಮ ಕ್ಷೇಮದ ಮೇಲೆ ಗಾಢವಾದ ಪರಿಣಾಮ ಬೀರುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಲು ಸಂಶೋಧಕರು ಇನ್ನೂ ಬಹಳಷ್ಟು ಪ್ರಗತಿ ಸಾಧಿಸಬೇಕಾಗಿದೆ. ಆದರೆ ಹಲವು ಮಂದಿಯ ಅಭಿಪ್ರಾಯದ ಪ್ರಕಾರ ಇದರಿಂದ ನೇರ ಹಾಗೂ ಪರೋಕ್ಷ ಪರಿಣಾಮಗಳೂ ಇವೆ. ನೇರವಾದ ಮಾರ್ಗದಲ್ಲಿ, ಒಬ್ಬ ನಿಕಟ ಸ್ನೇಹಿತನ ಇರುವಿಕೆ, ನಮಗೆ ಅನುಭೂತಿ ಹಾಗೂ ಮಾರ್ಗದರ್ಶನವನ್ನು ನಮ್ಮ ವ್ಯಕ್ತಿತ್ವದ ಒಳಹೊರಗುಗಳನ್ನು ತಿಳಿದುಕೊಂಡಿರುವ ಮತ್ತು ನಮ್ಮ ಸಂತೋಷದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳಿಂದ ಪಡೆಯಲು ಸಾಧ್ಯವಾಗುತ್ತದೆ. ಇಂಥ ವಿಶ್ವಾಸದಿಂದಾಗಿ ನಮ್ಮ ವೃತ್ತಿ ಹಾಗೂ ಕುಟುಂಬದ ವಿಚಾರದಲ್ಲಿ ನಾವು ಅತ್ಯಂತ ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ನಾವು ದೈನಂದಿನ ಜಂಟಾಟಗಳಿಂದ ಒತ್ತಡಕ್ಕೆ ಒಳಗಾಗುವ ಅಪಾಯ ತೀರಾ ಕಡಿಮೆ. ಪರೋಕ್ಷವಾಗಿ, ನಮ್ಮ ವೈಯಕ್ತಿಕ ಅನಿಸಿಕೆಗಳನ್ನು ನಮ್ಮ ವಿಶ್ವಾಸಾರ್ಹ ವ್ಯಕ್ತಿಗಳ ಜತೆ ಹಂಚಿಕೊಳ್ಳುವ ಸಾಮರ್ಥ್ಯ ಬೆಳೆಯುವುದರಿಂದ, ಅನಾರೋಗ್ಯಕರ ನಡವಳಿಕೆಗಳಾದ ಆತಂಕ ಸೃಷ್ಟಿಯಾಗುವುದು, ಧೂಮಪಾನ, ಅಧಿಕ ಸೇವನೆ, ಕಿರುಕುಳ ಹಾಗೂ ಜಡ ಜೀವನಶೈಲಿಗೆ ತುತ್ತಾಗುವ ಸಾಧ್ಯತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಒಂದು ವಿಶ್ವಾಸದ ಅಸ್ತಿತ್ವದಿಂದಾಗಿ, ನಮ್ಮ ಆಂತರಿಕ ಕ್ಷೋಭೆಯಿಂದ ಹೊರಬರಲು ನಮ್ಮ ವೈಯಕ್ತಿಕವಾಗಿ ಅನಾರೋಗ್ಯಕರ ಮಾರ್ಗಗಗಳನ್ನು ಅನುಸರಿಸುವುದರಿಂದ ದೂರ ಇರಿಸುತ್ತದೆ. ಇಂದಿನ ವೇಗದ ಜೀವನ ಶೈಲಿಯಲ್ಲಿ, ಒತ್ತಡ ಎನ್ನುವುದು ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ. ಆದ್ದರಿಂದ ವಿಶ್ವಾಸಾರ್ಹ ಸ್ನೇಹಿತನನ್ನು ಹೊಂದುವುದು ಹಿಂದೆಂದಿಗಿಂತಲೂ ಅಧಿಕ ಮಹತ್ವ ಪಡೆದಿದೆ ಹಾಗೂ ನಮ್ಮ ದೈನಂದಿನ ಕ್ಷೇಮಕ್ಕೆ ಅದು ಅನಿವಾರ್ಯವೂ ಆಗಿದೆ.

ಸುಸ್ಥಿರ ಹಾಗೂ ವಿಶ್ವಾಸಾರ್ಹ ಸಂಬಂಧವನ್ನು ಉಳಿಸಿಕೊಳ್ಳಲು ಆರು ಸೂತ್ರಗಳನ್ನು ನೀಡಬಹುದು.

1. ಅಧಿಕಾರಯುತವಾಗಿ ಹಾಗೂ ಸ್ಪಷ್ಟವಾಗಿ ಸಂವಹನ ಇರಲಿ. ನೀವು ಎಷ್ಟು ಇಷ್ಟವಾಗುತ್ತೀರಿ ಎನ್ನುವುದು ಇಲ್ಲಿ ಮುಖ್ಯವಲ್ಲ. ನಿಮ್ಮ ಆಲೋಚನೆ ಅಥವಾ ಸಂವಹನ ತೀರಾ ಅಸ್ಪಷ್ಟವಾಗಿದ್ದಾಗ ಯಾರು ಕೂಡಾ ನಿಮ್ಮ ಬಗ್ಗೆ ಅನುಭೂತಿ ಹೊಂದುವುದಿಲ್ಲ ಹಾಗೂ ನಿಮ್ಮ ನೆರವಿಗೆ ಬರಲಾರರು. "ನನ್ನ ಉದ್ಯೋಗದ ಬಗ್ಗೆ ನನಗೆ ಸಾಕಾಗಿ ಹೋಗಿದೆ" ಎನ್ನುವುದು ನಿಮ್ಮ ವಿಶ್ವಾಸದ ವ್ಯಕ್ತಿಗೆ ಹೆಚ್ಚು ಸ್ಪಷ್ಟವಾಗುತ್ತದೆಯೇ ವಿನಃ "ಕೆಲ ಅಂಶಗಳು ತಡವಾಗಿ ನನ್ನ ಯೋಚನೆಗೆ ಬರುತ್ತಿವೆ" ಎನ್ನುವುದಲ್ಲ.

2. ಸ್ವಯಂ ಪ್ರಶಂಸೆ (ನಾರ್ಸಿಸಿಸಂ)ಯನ್ನು ಆದಷ್ಟು ಕಡಿಮೆ ಮಾಡಿ. ವಾಸ್ತವ ಅನುಭವಗಳ ವಿನಿಮಯಕ್ಕೆ ಸ್ಪಷ್ಟವಾಗಿ ಸ್ಪಂದಿಸಿ. ಅಂದರೆ, ಉತ್ತಮ ಶ್ರೋತೃಗಳಾಗಿ; ಕೇವಲ ವಾಗ್ಮಿಗಳಾಗಬೇಡಿ. ನಿಮ್ಮ ವಿಶ್ವಾಸಾರ್ಹ ಸ್ನೇಹಿತ ಜೀವನದ ಘಟನೆಗಳ ಬಗ್ಗೆ ಕೂಡಾ ಹೆಚ್ಚು ಆಸಕ್ತಿಯನ್ನು ತೋರಿಸಿ.

3. ನಿಮ್ಮ ವಿಶ್ವಾಸದ ವ್ಯಕ್ತಿಗೆ ಕಾಳಜಿ ವಹಿಸುವ ಆಯಾಸವನ್ನು ತಡೆಯಿರಿ. ಯಾವುದು ನಿಮಗೆ ಹೆಚ್ಚು ಹೊರೆಯಾಗುವುದಿಲ್ಲವೋ ಅದರ ಆಯ್ಕೆಗೆ ಗಮನವಿರಲಿ ಮತ್ತು ಎಷ್ಟು ನಿಯತವಾಗಿ ಅಂಥ ನೆರವು ಬೇಕು ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿರಂತರವಾಗಿ ನಿಮ್ಮ ಅತಿಚಿಕ್ಕ ಭಾವನಾತ್ಮಕ ನೋವಿನ ಅಂಶಗಳ ಬಗ್ಗೆ ದೂರುವುದು ಅನುತ್ಪಾದಕವಾಗುತ್ತವೆ.

4. ಕೃತಜ್ಞತೆಯನ್ನು ಸಲ್ಲಿಸಿ. ಯಾರೂ ತಮ್ಮನ್ನು ಬಳಸಿಕೊಳ್ಳಲಾಗಿದೆ ಅಥವಾ ಶೋಷಿಸಲಾಗಿದೆ ಎಂಬ ಭಾವನೆ ಬೆಳೆಸಿಕೊಳ್ಳದಂತೆ ಎಚ್ಚರಿಕೆ ವಹಿಸಿ. ವ್ಯಾಖ್ಯಾನದಂತೆ, ನಿಮ್ಮ ವಿಶ್ವಾಸದ ಸ್ನೇಹಿತ ನೀವು ಬಾಡಿಗೆಗೆ ಪಡೆದ ಚಿಕಿತ್ಸಕ ಅಥವಾ ವೈದ್ಯ ಅಲ್ಲ. ಆತನಿಗೆ ಕೃತಜ್ಞತೆಯನ್ನು ಹಲವು ವಿಧದಲ್ಲಿ ಹೇಳಬಹುದು. ನಿಮಗೆ ಪ್ರಸ್ತುತ ಎನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಿ.

5. ನೇರವಾಗಿ ಕಾಲದಿಂದ ಕಾಲಕ್ಕೆ ಪ್ರತಿಕ್ರಿಯೆಯನ್ನು ಪಡೆಯುವತ್ತ ಗಮನ ಹರಿಸಿ. ತಪ್ಪುಗಳಿಂದ ಪಾಠ ಕಲಿಯಲು ಸಾಧ್ಯವಾಗಿದೆಯೇ ಅಥವಾ ಸಲಹೆ ಪಡೆದಿದ್ದರಿಂದ ಮಾರ್ಗದರ್ಶನ ಸಿಕ್ಕಿದೆಯೇ ಎನ್ನುವುದನ್ನು ನಿಮ್ಮ ಸ್ನೇಹಿತರಿಂದ ಕೇಳಿ ತಿಳಿದುಕೊಳ್ಳಲು ಹಿಂಜರಿಯಬೇಡಿ. ನೀವು ಏನು ಕೇಳಿದ್ದೀರೋ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿ.

6. ಪ್ರತಿ ಸಂಬಂಧದಲ್ಲೂ ಸಮತೋಲನ ಮುಖ್ಯವಾಗುತ್ತದೆ. ಆದ್ದರಿಂದ ನಿಮ್ಮ ಸಂತಸ- ದುಃಖಗಳನ್ನು ಹಂಚಿಕೊಳ್ಳಿ. ನಗು ಮತ್ತು ಅಳುವನ್ನು ಲಘು ಕ್ಷಣಗಳನ್ನು ಹಾಗೂ ಗಂಭೀರತೆಯನ್ನು ಹಂಚಿಕೊಳ್ಳಿ. ಕೆಲ ಮೋಜಿನ ಚಟುವಟಿಕೆಗಳನ್ನು ಜಂಟಿಯಾಗಿ ಹಮ್ಮಿಕೊಳ್ಳಿ. ಇದರಿಂದ ನೀವು ಹಾಗೂ ನಿಮ್ಮ ಸ್ನೇಹಿತ ಇಬ್ಬರೂ ಪುನರ್ ಚೈತನ್ಯ ಪಡೆಯಲು ಸಾಧ್ಯ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org