ನಿರೂಪಣೆ: : ನನಗೆ ಬೇರೆಯವರ ಸಹಾಯ ಕೇಳುವ ಅಗತ್ಯವಿದೆ ಎಂದು ಅರಿತುಕೊಳ್ಳುವ ದಿನದವರೆಗೂ ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೆ.

ಖಿನ್ನತೆಯನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು

ಕೃತಿ ಮೆಹತಾ ೧೮ರ ಹರೆಯದ ಪ್ರತಿಭಾನ್ವಿತೆ. ಮೂಲತಃ ಅಹಮದಾಬಾದ್‌ನಿಂದ ಬಂದಿರುವ ಈಕೆ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಬುದ್ಧಿವಂತೆ. ಫ್ರೌಢ ಶಿಕ್ಷಣ ಮುಗಿಸಿದ ನಂತರ ಮನಃಶಾಸ್ತ್ರ ಮತ್ತು ಸಾಹಿತ್ಯ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸಲು ಬೆಂಗಳೂರಿಗೆ ಬಂದಿದ್ದಳು. 
ಎರಡು ವರ್ಷಗಳ ಹಿಂದೆ ತಂದೆಯಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದ ತನ್ನ ತಾಯಿಯನ್ನು ಏಕಾಂಗಿಯಾಗಿ ಬಿಟ್ಟು ಹೊರ ಬಂದಿದ್ದು ಇದೇ ಮೊದಲು. 

ಕೃತಿ ಬಾಲ್ಯದಿಂದಲೂ ತನ್ನ ಪೋಷಕರ ವೈವಾಹಿಕ ಸಮಸ್ಯೆಯನ್ನು ನೋಡಿಕೊಂಡು ಬೆಳೆದವಳು. ‘ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನ. ಒಬ್ಬ ತಂದೆ ಎಂದರೆ ಸಂಗಾತಿಯ ಜೊತೆ ಪ್ರೀತಿಯಿಂದ ಇರಬೇಕು ಮತ್ತು ಆಕೆಯನ್ನು ರಕ್ಷಿಸಬೇಕು. ಆದರೆ ನನ್ನ ತಂದೆ  ಆಲಸಿ ಮತ್ತು ಕಟುಕ. ಆತನನ್ನು ಮತ್ತೊಮ್ಮೆ ನೋಡಲು ನಾನು ಇಷ್ಟಪಡುವುದಿಲ್ಲ’ ಎಂದು ಆಕೆಯ ತಂದೆ ಕುರಿತು ಕೃತಿ ಸ್ಪಷ್ಟವಾಗಿ ಹೇಳುತ್ತಿದ್ದಳು.

ಕೃತಿ ತನ್ನ ಕುಟುಂಬದಲ್ಲಿ ಅನೇಕ ಭಾವನಾತ್ಮಕ ಏರುಪೇರುಗಳನ್ನು ಎದುರಿಸಿದವಳು,ಆದರೆ ಅವಳ ಬೆಂಗಳೂರಿನಲ್ಲಿ ಹೊಸ ಜೀವನ ಆರಂಭಿಸಿದಾಗ ಇವ್ಯಾವ ಸಂಗತಿಗಳು ಪ್ರಮುಖವಾಗಲಿಲ್ಲ.
ಕಾಲೇಜಿನ ಮೊದಲ ವಾರದಲ್ಲಿ ಸಾಕಷ್ಟು ಸ್ನೇಹಿತರನ್ನು ಸಂಪಾದಿಸಿದೆ. ಆದರೆ ಈ ಸಂತೋಷ ಹೆಚ್ಚಿನ ಕಾಲ ಉಳಿಯಲಿಲ್ಲ’ ಎನ್ನುತ್ತಾರೆ ಕೃತಿ. ಆಕೆಯ ರೂಮ್ ಮೇಟ್ಸ್ ಮತ್ತು ಹೊಸ ಸ್ನೇಹಿತರು ಪಾರ್ಟಿಗಳಿಗೆ ಅವರ ಜೊತೆ ಬರುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ಕೃತಿಗೆ ಅಲ್ಲಿ ಅಸುರಕ್ಷಿತತೆಯ ಭಯ ಕಾಡುತ್ತಿತ್ತು ಮತ್ತು ಆಕೆ ಸಮಾಜದಲ್ಲಿ ಬೆರೆಯಲು ಅಷ್ಟೊಂದು ಉತ್ಸುಕಳಾಗಿರಲಿಲ್ಲ. 

ಕೃತಿ  ಸ್ವಲ್ಪ ದಪ್ಪಗಿದ್ದಾಳೆಂದು ಆಕೆಯ ತಾಯಿ ಯಾವಾಗಲೂ ಹೇಳುತ್ತಿದ್ದರು. ಆದರೆ ಕಾಲೇಜಿಗೆ ಹೋಗುವವರೆಗೂ ಇದರ ಬಗ್ಗೆ ಕೃತಿ ತಲೆಕೆಡಿಸಿಕೊಂಡಿರಲಿಲ್ಲ. ಕಾಲೇಜಿಗೆ ಹೋದ ಕೆಲವು ತಿಂಗಳ ನಂತರ ಆಕೆ ಮಾಮೂಲಿಗಿಂತ ಹೆಚ್ಚು ತಿನ್ನಲು ಪ್ರಾರಂಭಿಸಿದಳು. ಅತಿಯಾಗಿ ಸಿಹಿ ತಿನ್ನುಲು ಆರಂಭಿಸಿದಳು. ಹೆಚ್ಚು ಸಮಯ ನಿದ್ದೆ ಮಾಡುವುದರಿಂದ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ’.

ದಪ್ಪಗಾಗಿರುವ ಸಮಸ್ಯೆಗಿಂತ ಕಠಿಣ ಪರಿಸ್ಥಿತಿಯನ್ನು ಬದುಕಿನಲ್ಲಿ ಎದುರಿಸಿದ್ದೇನೆ ಎಂದು ನೆನಪಿಸಿಕೊಳ್ಳುವ ಕೃತಿಗೆ, ತೂಕವೊಂದೇ ಆಕೆಯನ್ನು ಹಗಲು ರಾತ್ರಿ ನಿರಂತರವಾಗಿ ಚಿಂತಿಸುವಂತೆ ಮಾಡಿತು. "ನನಗೆ ಸ್ನೇಹಿತರ ಜೊತೆ ಹೊರಡಗೆ ಹೋಗಲು ಇಷ್ಟ. ಆದರೆ ನಾನು ಕುರೂಪಿ ಎಂದು, ಹುಡುಗರು ನನ್ನತ್ತ ತಿರುಗಿ ನೋಡುವುದಿಲ್ಲವೆಂದು ಅಥವಾ ನನ್ನನ್ನು ಪ್ರೇಮದಿಂದ ಕಾಣುವುದಿಲ್ಲವೆಂದು ತಿಳಿಯಿತು. ಹೀಗಾಗಿ ಹೊರಗೆ ಹೋಗುವುದನ್ನು ನಿಲ್ಲಿಸಿದೆ. ನಾನು ನೋಡಲು ಚೆನ್ನಾಗಿಲ್ಲ ಮತ್ತು ನಾನು ಯಾರ ಪ್ರೀತಿಗೂ ಅರ್ಹಳಲ್ಲ ಎಂದು ನಾನು ನಂಬಿದ್ದೆ. ನನ್ನ ಆಸಕ್ತಿ ಕಡಿಮೆಯಾಯಿತು ಮತ್ತು  ನಾನು ಪಾತಳಕ್ಕೆ ಬಿದ್ದಂತೆ ಅನ್ನಿಸಿತು. ನನ್ನ ಕನಸು, ಭವಿಷ್ಯದಲ್ಲಿ ಆಸಕ್ತಿ ಕಳೆದುಕೊಂಡಿದೆ ಮತ್ತು ಅಂತ್ಯವಿಲ್ಲದ ದುಃಖದಲ್ಲಿ ಮುಳುಗಿ ಹೋದೆ. ಸೆಮೆಸ್ಟರ್‌ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದೆ ಏಕೆಂದರೆ ಪರೀಕ್ಷೆ ಬಗ್ಗೆ ಗಮನ ವಹಿಸಲು ಆಗಲಿಲ್ಲ" ಎನ್ನುತ್ತಾರೆ ಕೃತಿ.

ಆಗಾಗ ಹೇಗೆ ಜ್ಞಾನ ತಪ್ಪಿ ಬೀಳುತ್ತಿದ್ದೆ ಮತ್ತು ಯಾವುದೇ ನಿಖರ ಕಾರಣಗಳಿಲ್ಲದೇ ಅಳತ್ತಿದ್ದೆ ಎಂಬುದನ್ನು ಸ್ಮರಿಸಿಕೊಳ್ಳುತ್ತಾಳೆ. ತಾನು ದುರ್ಬಲ ಹುಡುಗಿ ಮತ್ತು ಎಲ್ಲವೂ ನನ್ನ ನಿಯಂತ್ರಣದಿಂದ ಕೈತಪ್ಪಿ ಹೋಗಿದೆಯೆಂದು ಆಕೆ ಯೋಚಿಸುತ್ತಿದ್ದಳು. 

"ಕೃತಿ ದಿನ ಬಿಟ್ಟು ದಿನ ನನಗೆ ಕರೆ ಮಾಡುತ್ತಿದ್ದಳು ಮತ್ತು ಯಾವಾಗಲೂ ಅವಳ ಧ್ವನಿ ಕುಗ್ಗಿದಂತಿತ್ತು ಮತ್ತು ಆಯಾಸವಾದಂತೆ ಕಾಣಿಸುತ್ತಿತ್ತು. ಆಕೆ ಹೇಗೆ ಅಳು ಆರಂಭಿಸುತ್ತಿದ್ದಳು, ಅತಿಯಾದ ತಲೆನೋವು, ಬೆನ್ನು ನೋವು ಎಂದು ದೂರುತ್ತಿದ್ದಳು ಎಂಬುದು ನನಗೆ ನೆನಪಿದೆ’ ಎನ್ನುತ್ತಾರೆ ಆಕೆಯ ತಾಯಿ. 

ತಾನು ತನ್ನ ಬದುಕಿನಲ್ಲಿ ಎಷ್ಟು ಬಳಲಿದ್ದೇನೆ ಎಂದು ಕೃತಿ ತನ್ನ ಸ್ನೇಹಿತೆ ಅನುವಿನ ಬಳಿ ಹೇಳಿದ್ದಳು ಮತ್ತು ಅವಳು ತನ್ನ ಸಮಸ್ಯೆಯ ಬಗ್ಗೆ ಮಾತನಾಡಿದ್ದಳು. ಇದರ ಸೂಕ್ಷ್ಮತೆ ಅರಿತ ಅನು ಕೃತಿಯ ತಾಯಿಗೆ ಇದನ್ನು ತಿಳಿಸಿದ್ದಳು. 

"ನನ್ನ ತಾಯಿ ನನ್ನನ್ನು ವೈದ್ಯಕೀಯ ಮನೊವೈದ್ಯರ ಹತ್ತಿರ ಕರೆದುಕೊಂಡು ಹೋದರು ಮತ್ತು ಅವರು ವೈದ್ಯಕೀಯ ತಪಾಸಣೆ ನಡೆಸಿ ನನಗೆ ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿದರು" ಎನ್ನುತ್ತಾರೆ ಕೃತಿ. 

ಮನೊವೈದ್ಯರು ಖಿನ್ನತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೀವ್ರತರವಾದ ಮಾನಸಿಕ ಅನಾರೋಗ್ಯ ಮತ್ತು ಇದು ದೌರ್ಬಲ್ಯದ ಸಂಕೇತವಲ್ಲ ಎಂದು  ಕೃತಿಗೆ ವಿವರಿಸಿದರು.

ಖಿನ್ನತೆಗೆ ಚಿಕಿತ್ಸೆ ನೀಡಬಹುದಾದ ಖಾಯಿಲೆ. ಅಲ್ಪ ಪ್ರಮಾಣದ ಖಿನ್ನತೆಯನ್ನು ಕೇವಲ ಮನೋಚಿಕಿತ್ಸೆಯೊಂದರಿಂದಲೆ ಗುಣಪಡಿಸಬಹುದು. ಆದರೆ ಸಾಕಷ್ಟು ಗಂಭೀರ ಸಂದರ್ಭಗಳಲ್ಲಿ, ವ್ಯಕ್ತಿಯು ಆಹಾರ ಸೇವನೆ ಮಾಡದೆ ಇದ್ದರೆ, ನಿದ್ದೆ ಮಾಡಲಾಗದೆ ಒದ್ದಾಡುತ್ತಿದ್ದರೆ ಅಥವಾ ಸಂಪೂರ್ಣವಾಗಿ ನಕಾರಾತ್ಮಕ, ಆತ್ಮಹತ್ಯೆಯ ಯೋಚನೆಗಳನ್ನು ಮಾಡುತ್ತಿದ್ದರೆ, ಅಂಥ ಸಮಯದಲ್ಲಿ ಔಷಧಿ ಮತ್ತು ಮನೋಚಿಕಿತ್ಸೆಯನ್ನು ಒಟ್ಟಾಗಿ ಪರಿಣಾಮಕಾರಿಯಾಗಿ ಬಳಸಬಹುದು.

ಹೆಚ್ಚಿನ ಸಮಯ ಉದಾಸೀನ ಮನೋಭಾವ ಹೊಂದಿರುವುದು, ಹಿಂದೆ ಸವಿದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ತಪ್ಪಿತಸ್ಥ ಮನೊಭಾವ, ಅಳುವುದು, ನಿದ್ರೆಯಿಲ್ಲದಿರುವುದು/ಸದಾ ನಿದ್ದೆಯಲ್ಲಿರುವುದು, ಪದೇ ಪದೇ ತಿನ್ನುವುದು,ಹಸಿವಾಗದಿರುವುದು ಮತ್ತು  ಆತ್ಮಹತ್ಯೆಯ ಯೋಚನೆ ಮಾಡುವುದು ಇವುಗಳೆಲ್ಲ ಖಿನ್ನತೆಯ ಸಾಮಾನ್ಯ ಲಕ್ಷಣಗಳು. 

ನಿಮ್ಮ ಸಂಬಂಧಗಳು  ಮತ್ತು ವೃತ್ತಿ ನಿರ್ವಹಣೆಯ ಮೇಲೆ ಇಂಥ ಗುಣಲಕ್ಷಣಗಳು ಯಾವಾಗ ಪರಿಣಾಮ ಬೀರಲು ಆರಂಭಿಸುತ್ತದೆಯೋ, ನೀವು ತಜ್ಞರ ಸಲಹೆ ಪಡೆಯುವುದು ಅವಶ್ಯ. 

ಈ ಕಥೆಯನ್ನು ಮಾನಸಿಕ ಆರೋಗ್ಯ ತಜ್ಞರ ಸಹಾಯದೊಂದಿಗೆ ರೋಗದ ಲಕ್ಷಣ ಮತ್ತು ಸ್ಥಿತಿಯನ್ನು ಆಧರಿಸಿ ಬರೆಯಲಾಗಿದೆ. ಇದೊಂದು ಯಾವುದೇ ನಿರ್ದಿಷ್ಟ ವ್ಯಕ್ತಿಯ ಪ್ರಕರಣವಲ್ಲ, ಆದರೆ ಖಿನ್ನತೆ ಹೊಂದಿರುವ ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org