ಮಾನಸಿಕ ಸಮಸ್ಯೆಯಿಂದ ಚೇತರಿಕೆಗೆ ಆರೈಕೆ ಅಗತ್ಯ

ಮಾನಸಿಕ ಸಮಸ್ಯೆ ಇರುವವರಿಗೆ ಉತ್ಕೃಷ್ಟ ವಾತಾವರಣವಿದ್ದರೆ ಅವರು ಬೇಗನೇ ಚೇತರಿಸಿಕೊಳ್ಳಬಲ್ಲರು.

ಕರ್ನಾಟಕದ ಪಾವಗಡ ತಾಲೂಕಿನ ಮಂಗಲವಾಡ ಗ್ರಾಮದ ಒಂದು ಗುಡಿಸಲಿನಲ್ಲಿ 32 ವರ್ಷದ ಹನುಮಂತರಾಯ ತನ್ನ ಸುತ್ತಲಿರುವ ನೆರೆಹೊರೆಯವರನ್ನು ವಿಚಲಿತನಾಗಿ ನೋಡುತ್ತಾ ಕುಳಿತಿರುತ್ತಾನೆ. ಹನುಮಂತರಾಯನು ಮಗುವಾಗಿದ್ದಾಗಲೇ ಸೈಕೋಸಿಸ್ ಮತ್ತು ಬೌದ್ಧಿಕ  ವೈಕಲ್ಯತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. ಆತನ ತಾಯಿ ಲಕ್ಷ್ಮಮ್ಮ ಆತನ ಸರ್ವಸ್ವ ಮತ್ತು ಏಕೈಕ ಆರೈಕೆದಾರಳಾಗಿದ್ದಾಳೆ. 80 ವರ್ಷದ ಲಕ್ಷ್ಮಮ್ಮ ತುಂಬಾ ಬಳಲಿದ್ದಾರೆ. “ಪ್ರತಿ ಕ್ಷಣವೂ ಆತನ ಮೇಲೆ ನಿಗಾ ಇರಿಸುವುದು ಮತ್ತು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಕೆಲವೊಮ್ಮೆ ಆತ ಸುತ್ತಮುತ್ತಲಿನವರ ಮೇಲೆ ಕೋಪಗೊಳ್ಳುತ್ತಾನೆ, ಉದ್ರಿಕ್ತನಾಗುತ್ತಾನೆ. ನನ್ನ ಬಳಿಕ ಈತನನ್ನು ಯಾರು ನೋಡಿಕೊಳ್ಳುತ್ತಾರೆ?” ಎಂದು ಚಿಂತಿತರಾಗುತ್ತಾರೆ.

ಲಕ್ಷ್ಮಮ್ಮ ಪಾವಗಡದ ನರೇಂದ್ರ ಫೌಂಡೇಶನ್ ಮತ್ತು ಬೆಂಗಳೂರಿನಲ್ಲಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಬೇಸಿಕ್ ನೀಡ್ಸ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಗಳು ಸೇರಿ ರಚಿಸಿರುವ ವೈಕಲ್ಯತೆಯ ಸ್ವ-ಸಹಾಯ ಸಂಘದ ಸದಸ್ಯೆ. ಈ ಸಂಸ್ಥೆಯು ಮಂಗಲವಾಡದಂಥ ಗ್ರಾಮದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಾಧಿಸಲು ಕೆಲಸ ಮಾಡುತ್ತದೆ.

ಲಕ್ಷ್ಮಮ್ಮ ಮನೆಯಿಂದ ಹೊರಗೆ ಹೋಗಬೇಕಾದ ಸಂದರ್ಭದಲ್ಲಿ ತನ್ನ ಮಗನನ್ನು ನೋಡಿಕೊಳ್ಳಲು ಸಂಘದ ಸದಸ್ಯರ ಸಹಾಯವನ್ನು ಪಡೆಯುತ್ತಾರೆ. “ಒಬ್ಬ ಆರೈಕೆದಾರಳಾಗಿ ಆಕೆಯು ಒಬ್ಬಂಟಿತನ ಹಾಗೂ ಸುಸ್ತಿನಿಂದ ಬಳಲಬಹುದು. ನಾವು ಅವಳಂತಹ ಇತರ ಆರೈಕೆದಾರರು ಕೆಲ ಸಮಯದವರೆಗೆ ಅವಳಿಗೆ ಆರೈಕೆಯ ಜವಾಬ್ದಾರಿಯಿಂದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತೇವೆ. ನಾವು ಸರತಿಯಂತೆ ಒಂದು ಕುಟುಂಬದಲ್ಲಿರುವ ಮಾನಸಿಕ ಅನಾರೋಗ್ಯಪೀಡಿತರನ್ನು ನೋಡಿಕೊಳ್ಳುತ್ತೇವೆ,” ಎನ್ನುತ್ತಾರೆ ವೈಕಲ್ಯತೆ ಸಂಘದ ಸದಸ್ಯರಾದ ಸತೀಶ್. ಆದರೆ ಸಣ್ಣಪುಟ್ಟ ಕೆಲಸಗಳಿಗೆ, ಉದಾಹರಣೆಗೆ ಹತ್ತಿರದ ಅಂಗಡಿಗೆ ಹೋಗುವುದಕ್ಕೆ ಆಕೆಯು ನೆರೆಹೊರೆಯವರ ಸಹಾಯವನ್ನು ಪಡೆಯುತ್ತಾಳೆ.

ಜಿಲ್ಲಾ ಹಂತದಲ್ಲಿ ಮಾನಸಿಕ ಆರೋಗ್ಯ ತಜ್ಞರು ಹಲವಾರು ವೈದ್ಯಕೀಯ ಶಿಬಿರಗಳನ್ನು ನಡೆಸಿದರು. ಅಭಿವೃದ್ಧಿ ಕಾರ್ಯಕರ್ತರು ಹಲವು ವರ್ಷಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು. ಇದೆಲ್ಲವುಗಳ ಮೂಲಕ  ಅನಾರೋಗ್ಯಪೀಡಿತರು ಹಾಗೂ ಅವರ ಕುಟುಂಬದವರ ಅವಶ್ಯಕತೆಗಳನ್ನು ಅರಿತುಕೊಂಡು, ಮಂಗಲವಾಡ ಹಾಗೂ ಮತ್ತಿತರ ಹಳ್ಳಿಗಳ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಿದೆ. ಇದರಿಂದ ಲಕ್ಷ್ಮಮ್ಮಳಂತ ಆರೈಕೆದಾರರಿಗೆ ಸಹಾಯವಾಗಿದೆ.

ವ್ಯಕ್ತಿ ಮಾನಸಿಕ ಅನಾರೊಗ್ಯದಿಂದ ಚೇತರಿಸಿಕೊಳ್ಳಲು ಸಮುದಾಯದ ಆರೈಕೆ ಯಾಕೆ ಮುಖ್ಯ?
ಮಾನಸಿಕ ಅನಾರೋಗ್ಯ ಪೀಡಿತರ ಆರೈಕೆಯು ಔಷಧಿಗೆ ಮಾತ್ರ ಸೀಮಿತವಾಗಿಲ್ಲ. ಅವರು ವಾಸಿಸುವ ಸಮುದಾಯದ ಮತ್ತು ಆರೈಕೆದಾರರ ಬೆಂಬಲ ಹಾಗೂ ಪುನಃಶ್ಚೇತನವು ಚೇತರಿಕೆಗೆ ಬಹಳ ಮುಖ್ಯವಾಗುತ್ತದೆ. ವೈದ್ಯಕೀಯ ಚಿಕಿತ್ಸೆಯ ನಂತರ ಅನಾರೋಗ್ಯಪೀಡಿತ ವ್ಯಕ್ತಿಗಳು ತಮ್ಮ ದೈನಂದಿನ ಚಟುವಟಿಕೆಯನ್ನು ನಿಭಾಯಿಸುವಂತಾಗಲು, ಕೆಲಸಕ್ಕೆ ತೆರಳಲು ಶುರುಮಾಡಲು, ತಮ್ಮನ್ನು ಹಾಗೂ ಕುಟುಂಬದವರನ್ನು ಸಲಹಲು ಮತ್ತು ಸಮುದಾಯದಲ್ಲಿ ಭಾಗವಹಿಸಲು ಅವರಿಗೆ ಪುನಃಶ್ಚೇತನದ ಅಗತ್ಯವಿರುತ್ತದೆ.  

ಮಾನಸಿಕ ಆರೋಗ್ಯವನ್ನು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಸೇರಿಸುವುದು ಮತ್ತು ಸೂಕ್ತವಾದ ವೈದ್ಯಕೀಯ ಸೌಲಭ್ಯಗಳಿರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ದೊಡ್ಡ ದೊಡ್ಡ ಸಮುದಾಯಗಳಿಗೆ ಸೇವೆ ಒದಗಿಸುವುದು ಸಮುದಾಯ ಮಾನಸಿಕ ಆರೋಗ್ಯದ ಪ್ರಮುಖ ಉದ್ದೇಶ. ಬೇಸಿಕ್ ನೀಡ್ಸ್ ಇಂಡಿಯಾದಂತಹ ಸಂಸ್ಥೆಗಳು ಉಳಿದ ತನ್ನ ಸಹಬಾಗಿ ಸಂಸ್ಥೆಗಳ ಮತ್ತು ಮಾನಸಿಕ ಆರೋಗ್ಯ ತಜ್ಞರ ಜೊತೆಯಲ್ಲಿ ಅಂಥ ಪ್ರದೇಶಗಳಲ್ಲಿ ಸಮುದಾಯ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಸಮುದಾಯ ಕಾರ್ಯಕರ್ತರು ಜಾಗೃತಿಯನ್ನು ಉಂಟುಮಾಡಲು, ರೋಗಿಗಳನ್ನು ತಲುಪಲು ಮತ್ತು ಅವರಿಗೆ ವೈದ್ಯಕೀಯ ಶಿಬಿರಗಳಲ್ಲಿ ಚಿಕಿತ್ಸೆಯನ್ನು ಕೊಡಿಸಲು ಸಹಾಯ ಮಾಡುತ್ತಾರೆ. ಸ್ಥಳೀಯರಿಗೆ ಸಮರ್ಪಕವೆನಿಸುವಂತಹ ರೀತಿಯಲ್ಲಿ ಬೀದಿ ನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಶಿಬಿರಗಳನ್ನು ಸಹ ಏರ್ಪಡಿಸಲಾಗುತ್ತದೆ.

ಸಮುದಾಯ ಆರೈಕೆಯೆಂದರೇನು?
ಈರೋಡ್ ಜಿಲ್ಲೆಯ ತಲ್ವಾಡಿ ಪ್ರದೇಶದಲ್ಲಿ ಶಾಂತಾರಾಮ್ ಎಂಬ ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿಯು ರಸ್ತೆಯಲ್ಲಿ ಅಲೆದಾಡುತ್ತಿದ್ದ. ಅದನ್ನು ನೋಡಿದ ಸ್ವಯಂಸೇವಾ ಸಂಸ್ಥೆಯೊಂದರ ಪ್ರತಿನಿಧಿ ಆತನನ್ನು ಹತ್ತಿರದ ವೈದ್ಯಕೀಯ ಶಿಬಿರಕ್ಕೆ ಕರೆದುಕೊಂಡು ಹೋದರು. ಆತನ ಚಿಕಿತ್ಸೆಯ ಜವಾಬ್ದಾರಿಯನ್ನು ಹೊರಲು ಯಾವ ಆರೈಕೆದಾರರೂ ಲಭ್ಯವಿರದ ಕಾರಣ ಪೋಲಿಸರೇ ಆತನ ಹೊಣೆಯನ್ನು ವಹಿಸಿಕೊಂಡರು. ಸುಮಾರು ಮೂರು ತಿಂಗಳವರೆಗೆ ಪೋಲಿಸ್ ಸಿಬ್ಬಂದಿಗಳೇ ಆತನಿಗೆ ಔಷಧವನ್ನು ನೀಡಿದರು. ತನ್ನ ಅನಾರೋಗ್ಯದಿಂದ ಚೇತರಿಸಿಕೊಂಡ ಶಾಂತಾರಾಮ್ ಕೊನೆಗೆ ತಾನು ಎಲ್ಲಿಂದ ಬಂದಿರುವೆನೆಂಬ ವಿಷಯವನ್ನು ತಿಳಿಸಿದನು. ಪೋಲಿಸ್ ಸಿಬ್ಬಂದಿಗಳು ಆತನ ಸ್ವಂತ ಊರಿಗೆ ಕರೆದುಕೊಂಡು ಹೋಗಿ ಬಿಟ್ಟರು. (ಈ ಉದಾಹರಣೆಯು ನೈಜ ಘಟನೆಯನ್ನು ಆಧರಿಸಿದೆ. ಖಾಸಗಿತನವನ್ನು ರಕ್ಷಿಸಲು ಹೆಸರುಗಳನ್ನು ಬದಲಿಸಲಾಗಿದೆ.)

ಸಮುದಾಯ ಆರೈಕೆಯಲ್ಲಿ ಅದರ ಸದಸ್ಯರು ಗಂಭೀರವಾದ ಮಾನಸಿಕ ಖಾಯಿಲೆಯಿರುವ ವ್ಯಕ್ತಿಗಳ ಆರೈಕೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇಲ್ಲಿ ಪ್ರಮುಖವಾಗಿ ಔಷಧಗಳನ್ನು ನೀಡುವುದು ಮತ್ತು ವ್ಯಕ್ತಿಯ ಸುರಕ್ಷತೆ ಮತ್ತು ಒಳಿತನ್ನು ಗಮನಿಸಲಾಗುತ್ತದೆ. ಕುಟುಂಬದ ಇತರ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರು ಸೇರಿದಂತೆ ಸಮುದಾಯದ ಆರೈಕೆದಾರರು ಮೂಲ ಆರೈಕೆದಾರರಿಗೆ ತಾತ್ಕಾಲಿಕವಾಗಿ ವಿಶ್ರಾಂತಿ ದೊರೆಯಲು ತಮ್ಮ ಸಹಾಯ ನೀಡುತ್ತಾರೆ.

ಆರೈಕೆದಾರರು ಮಾನಸಿಕ ಆರೋಗ್ಯ ತಜ್ಞರು ಸೂಚಿಸಿದ ರೀತಿಯಲ್ಲಿ ರೋಗಿಗಳನ್ನು ಕಾಳಜಿ ಮಾಡಲು ಮತ್ತು ಔಷಧಿಗಳನ್ನು ನೀಡಲು ತಿಳಿದಿರಬೇಕು. ಒಬ್ಬ ರೋಗಿಯ ಚಿಕಿತ್ಸೆಯ ವಿಧಾನವು ಇನ್ನೊಂದು ರೋಗಿಯಿಂದ ವಿಭಿನ್ನವಾಗಿರುತ್ತದೆ ಎಂಬುದನ್ನು ಅವರು ನೆನಪಿಡಬೇಕು.

ನಗರ ಪ್ರದೇಶದಲ್ಲಿ ಸಮುದಾಯ ಆರೈಕೆಯು ಸಾಧ್ಯವೇ?
ನಗರ ಪ್ರದೇಶದಲ್ಲಿ ಆರೈಕೆದಾರರು ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡು ಆಗಾಗ ಪರಸ್ಪರ ಭೇಟಿಯಾಗಿ ಸಮಸ್ಯೆಗಳನ್ನು ಚರ್ಚಿಸಿ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಸಮುದಾಯ ಆರೈಕೆಯ ಕಲ್ಪನೆ ನಗರಗಳಲ್ಲಿ ಇನ್ನೂ ಸಾಮಾನ್ಯವಾಗಿ ವ್ಯಾಪಕವಾಗಿ ಕಂಡುಬರುವ ಅವಶ್ಯಕತೆಯಿದೆ. “ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯದ ಭಾವನೆಯು ಗಟ್ಟಿಯಾಗಿರುತ್ತದೆ. ಅಲ್ಲಿ ಸ್ವಯಂ ಪ್ರೇರಿತರಾಗಿ ಇನ್ನೊಬ್ಬರ ಆರೈಕೆಗೆ ಮತ್ತು  ಸಹಾಯಕ್ಕೆ ಬರುವ ವ್ಯಕ್ತಿಗಳು ದೊರೆಯುತ್ತಾರೆ. ಆದರೆ ನಗರ ಪ್ರದೇಶಗಲ್ಲಿ ಜನರು ಜಾಗದಿಂದ ಜಾಗಕ್ಕೆ ವಲಸೆ ಹೋಗುವುದರಿಂದ ಮತ್ತು ತಮ್ಮದೇ ಕಾರ್ಯಗಳಲ್ಲಿ ವ್ಯಸ್ಥರಾಗಿರುವುದರಿಂದ ಸಮುದಾಯ ಭಾವನೆಯು ಸದೃಢವಾಗಿ ಇರುವುದಿಲ್ಲ. ಆದರೆ ಅಂತಹ ಒಂದು ವ್ಯವಸ್ಥೆಯು ಇರುವುದರಿಂದ ರೋಗಿ ಮತ್ತು ಆರೈಕೆದಾರರಿಗೆ ಹೆಚ್ಚಿನ ಸಹಾಯ ದೊರೆಯುತ್ತದೆ,” ಎನ್ನುತ್ತಾರೆ ನಿಮ್ಹಾನ್ಸ್ ನ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎನ್.  ಜನಾರ್ಧನ.

ಸಮುದಾಯ ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿಗಳ ಆರೈಕೆಯಲ್ಲಿ ತೊಡಗಬೇಕಾದರೆ ಅವರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ತಿಳುವಳಿಕೆ ಹಾಗೂ ಮಾನಸಿಕ ಅಸ್ವಸ್ಥತೆ ಹೊಂದಿರುವವರ ಕುರಿತು ಸಹಾನುಭೂತಿ ಇರಬೇಕು ಎಂಬುದು ತಜ್ಞರ ಅಭಿಪ್ರಾಯ.

ಆರೈಕೆದಾರರು ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಾಗುವ ಲಾಭಗಳು: 
ಸ್ಕಿಜೋಫ್ರೀನಿಯಾ, ಬೈಪೋಲಾರ್ ಡಿಸಾರ್ಡರ್ ಮುಂತಾದ ಗಂಭೀರ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆಯು ದೀರ್ಘಕಾಲೀನವಾಗಿದೆ. ಇದು ಕೆಲ ಸಮಯಾನಂತರ ಆರೈಕೆದಾರಲ್ಲಿ ಬಳಲಿಕೆಯನ್ನುಂಟು ಮಾಡಬಹುದು. ಅವರಿಗೆ ತಮ್ಮ ಉದ್ಯೋಗದಲ್ಲಿ ತೊಡಗಲು ಸಾಮಾಜಿಕ ಸಮಾರಂಭಗಳಲ್ಲಿ ಬೆರೆಯಲು ಇದರಿಂದ ಸಾಧ್ಯವಾಗದೇ ಇರಬಹುದು. ಆದರೆ ಮನೆಯವರು ಮತ್ತು ನೆರೆಹೊರೆಯವರ ಸಹಾಯದಿಂದ ಅವರ ಹೊರೆ ಕಡಿಮೆಯಾಗಲು ಸಾಧ್ಯವಿದೆ. ಇದರಿಂದ ಲಕ್ಷ್ಮಮ್ಮನಂತಹ ಆರೈಕೆದಾರರು ತಮ್ಮ ಉದ್ಯೋಗವನ್ನು ನಿರ್ವಹಿಸಿ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಸಹಾಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಪೋರ್ಟ್ ಗ್ರೂಪಿನ ಸಹಾಯದಿಂದ ನೆರೆಹೊರೆಯವರು ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುತ್ತಾರೆ. ಸಮುದಾಯದ ಬೆಂಬಲದಿಂದ ಆರೈಕೆದಾರರಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಪ್ರತ್ಯೇಕತೆಯ ಭಾವವು ಕಾಡುವುದಿಲ್ಲ. ಸಮುದಾಯವು ಅನಾರೋಗ್ಯ ಪೀಡಿತ ವ್ಯಕ್ತಿಯ ನಡವಳಿಕೆಯನ್ನು ಅಂಗೀಕರಿಸುವುದರಿಂದ ರೋಗಿಗೂ ಅಗತ್ಯ ಬೆಂಬಲ ದೊರೆಯುತ್ತದೆ. ಇದರಿಂದ ವ್ಯಕ್ತಿಯು ಚೇತರಿಸಿಕೊಂಡ ಮೇಲೆ ಸಮುದಾಯವು ಅವರಿಗೆ ಕಾರ್ಯಶೀಲ ವ್ಯಕ್ತಿಯಾಗಲು ಸಹಕರಿಸುತ್ತದೆ.

ಸಮುದಾಯದ ಸದಸ್ಯರು ಹೇಗೆ ಸಹಾಯ ಮಾಡಬಹುದು?

  • ವ್ಯಕ್ತಿಯು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಲ್ಲಿ ನೀವು ಅವರ ಕೌಶಲ್ಯವನ್ನು ಆಧರಿಸಿ ಉದ್ಯೋಗವನ್ನು ಪಡೆಯಲು ಸಹಾಯ ಮಾಡಬಹುದು. ಅಥವಾ ನೀವೇ ಉದ್ಯೋಗವನ್ನು ನೀಡಬಹುದು. ಒಂದು ವೇಳೆ ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಆರೈಕೆದಾರರಿಗೆ ಸಹಾಯ ಮಾಡಬಹುದು.
  • ನಿಮ್ಮ ಸಹಾಯದಿಂದ ಅವರಿಗೆ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ.
  • ನೀವು ಅವರಿಗೆ ಕಾಗದಪತ್ರಗಳನ್ನು ತಯಾರಿಸಿಕೊಳ್ಳಲು ಸಹಾಯ ಮಾಡಬಹುದು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿಮಾಡಿ ವೈಕಲ್ಯತೆಯ ಪ್ರಮಾಣಪತ್ರಗಗಳನ್ನು ಪಡೆಯಲು ನೆರವಾಗಬಹುದು.
  • ಆರೈಕೆದಾರರಿಗೆ ಹಲವು ಬಾರಿ ಒಬ್ಬಂಟಿತನ ಕಾಡುತ್ತದೆ. ಅವರನ್ನು ಆದಷ್ಟು ನಿಮ್ಮ ಮನೆಯ ಮತ್ತು ಸಮುದಾಯದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಮತ್ತು ನಿಮ್ಮ ಜೊತೆ ಬೆರೆಯಲು ಪ್ರೋತ್ಸಾಹಿಸಿ.

ಸಮುದಾಯದಲ್ಲಿ ಜಾಗೃತಿ ಮೂಡಿಸುವುದು:
ಕೆಲವು ಮಾನಸಿಕ ಸಮಸ್ಯೆಗಳಿರುವವರಿಗೆ, (ಉದಾಹರಣೆಗೆ ಖಿನ್ನತೆ, ಸ್ಕಿಜೋಫ್ರೀನಿಯಾ ಮತ್ತು ಇತರೆ) ಅವರ ಮನೆ ಮತ್ತು ಸಮುದಾಯಗಳಲ್ಲಿರುವ ಇತರ ಮಾನಸಿಕ ಖಾಯಿಲೆಯಿರುವ ವ್ಯಕ್ತಿಗಳ ಜೊತೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಜಾಗೃತಿ ಕಾರ್ಯಕ್ರಮಗಳ ಮೂಲಕ, ಸಮಸ್ಯೆ ಬಗ್ಗೆ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸಬಹುದು. ಅಗತ್ಯ ಕೌಶಲ್ಯಗಳನ್ನು ಜನರಿಗೆ ತಿಳಿಸಿಕೊಡುವುದರಿಂದ ಮಾನಸಿಕ ಅನಾರೋಗ್ಯಕ್ಕೆ ಸಂಬಂಧಿಸಿದ ಪೂರ್ವಗ್ರಹವನ್ನು ಕಡಿಮೆ ಮಾಡಬಹುದು. ಬೀದಿ ನಾಟಕ, ಗೋಡೆ ಬರಹಗಳಿಂದಲೂ ಸಮುದಾಯದ ಸದಸ್ಯರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಬಹುದು. “ ಈ ತರಹದ ಮಾಹಿತಿಗಳನ್ನು ಸತತವಾಗಿ ಹರಡುವುದರಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಪೂರ್ವಗ್ರಹವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ,” ಎನ್ನುತ್ತಾರೆ ಡಾ. ಜನಾರ್ಧನ. ಅವರೇ ಹೇಳುವಂತೆ, “ಚಿಕಿತ್ಸೆಯ ನಂತರ ಚೇತರಿಸಿಕೊಂಡ ರೋಗಿಗಳು ಕೂಡ ಸಮುದಾಯಕ್ಕೆ ಧನಾತ್ಮಕ ಕೊಡುಗೆ ನೀಡಲು ಇದರಿಂದ ಸಾಧ್ಯವಾಗುತ್ತದೆ.”

ಆಕರಗಳು: 1- Janardhana, N & Naidu, DM (2012). Inclusion of people with mental illness in Community Based Rehabilitation: need of the day.  International Journal of  Psychosocial Rehabilitation. Vol 16(1) 117-124

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org