ಕಾರ್ಯ ಕ್ಷೇತ್ರ

ಮಾನಸಿಕ ಕಾಯಿಲೆಯಿಂದ ಚೇತರಿಸಿಕೊಂಡ ವ್ಯಕ್ತಿ ಕೆಲಸಕ್ಕೆ ಹಿಂದಿರುಗಿದಾಗ

ವೈಟ್ ಸ್ವಾನ್ ಫೌಂಡೇಶನ್

ಮಾನಸಿಕ ಕಾಯಿಲೆಯಿಂದ ಚೇತರಿಸಿಕೊಂಡ ವ್ಯಕ್ತಿ ಕೆಲಸಕ್ಕೆ ಹಿಂದಿರುಗಿದರೆ ಅವರ ಯೋಗಕ್ಷೇಮಕ್ಕೆ ಒಳ್ಳೆಯದು. ಕೆಲಸ ಮಾಡಿ ಬಿಸೀಯಾಗಿದ್ದರೆ ಬೇಗ ಚೇತರಿಸಿಕೊಳ್ಳಲು ಸಾಧ್ಯ. ಕೆಲಸ ಮಾಡಿದರೆ ಅವರ ಆತ್ಮವಿಶ್ವಾಸ ಮತ್ತು ಆತ್ಮಗೌರವ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಯ ಸಹೋದ್ಯೋಗಿಗಳಿಗೆ ಮಾನಸಿಕ ಅಸ್ವಸ್ಥತೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡುತ್ತದೆ ಮತ್ತು ಜೊತೆಗೂಡಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗುತ್ತದೆ.

ಹಲವಾರು ಸಂಸ್ಥೆಗಳಲ್ಲಿ ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಗೆ ಕೆಲಸ ಕೊಡುವುದಿಲ್ಲ. ಆದರೆ ಕೆಲವು ಸಂಸ್ಥೆಗಳು ಸಂದರ್ಭವನ್ನು ಪರಿಗಣಿಸಿ ಅವರಿಗೆ ಬೆಂಬಲ ನೀಡುತ್ತಾರೆ. ಸಂಸ್ಥೆಗಳಲ್ಲಿ ಮಾನಸಿಕ ಸಮಸ್ಯೆ ಕುರಿತ ಯಾವುದೇ ಕಾರ್ಯನೀತಿ ಇಲ್ಲ. ಇದು, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಗೆ ಮತ್ತು ಸಂಸ್ಥೆಯ ಆಡಳಿತ ವರ್ಗಕ್ಕೆ ಸವಾಲಿನ ಅಂಶ. ಒಂದೆಡೆ, ಸಮಸ್ಯೆಯಲ್ಲಿರುವ  ವ್ಯಕ್ತಿಗೆ ತನ್ನ ಉದ್ಯೋಗ ಸುರಕ್ಷತೆಯ ಬಗ್ಗೆ ಚಿಂತೆ ಮತ್ತೊಂದೆಡೆ, ಆಡಳಿತ ವರ್ಗ ಸೂಕ್ತ ಕಾರ್ಯನೀತಿ ಇಲ್ಲದಿರುವ ಕಾರಣದಿಂದ, ಉದ್ಯೋಗಿಗೆ ನೆರವು ನೀಡುವುದಿಲ್ಲ.       

ಇದರ ಜೊತೆಗೆ ಈ ಕೆಲವು ಕಾರಣಗಳಿಂದ ಕೆಲಸಕ್ಕೆ ಹಿಂದಿರುಗಲು ಆತಂಕ ಉಂಟಾಗಬಹುದು:

  • ನಾನು ಕಳಂಕಕ್ಕೆ ಒಳಗಾಗುತ್ತೇನಾ?  
  • ಕೆಲಸ ಕಳೆದುಕೊಳ್ಳುತ್ತೇನಾ? ಅಥವಾ ಪ್ರಮೋಷನ್ ಸಿಗುವುದಿಲ್ಲವೇ?
  • ನನ್ನ ಸಹೋದ್ಯೋಗಿಗಳು ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವರೇ?
  • ಕೆಲಸದ ಒತ್ತಡವನ್ನು ನಿಭಾಯಿಸಲು ನನ್ನಿಂದ ಸಾಧ್ಯವೇ?  

ಈ ಸಮಸ್ಯೆಗಳಿಗೆ ಉದ್ಯೋಗ ಸಂಸ್ಥೆಗಳು ಏನು ಮಾಡಬಹುದು?    

ನಾವು ಸೂಪರ್ವೈಸರ್, ಹೆಚ್ ಆರ್ ಮ್ಯಾನೇಜರ್ ಮತ್ತು ಮಾನಸಿಕ ಆರೋಗ್ಯ ತಜ್ಞರು, ಇವರೊಂದಿಗೆ ಮಾತನಾಡಿ ಸಂಸ್ಥೆಗಳು ಏನು ಮಾಡಬಹುದು ಎಂಬುದಕ್ಕೆ ಅವರ ಸಲಹೆಗಳು ಹೀಗಿವೆ:

  • ಎಂಪ್ಲಾಯೀ ಅಸಿಸ್ಟೆಂಟ್ ಪ್ರೋಗ್ರಾಮ್ ಅಳವಡಿಸಬೇಕು. ಮಾನಸಿಕ ಆರೋಗ್ಯವನ್ನು ಈ ಯೋಜನೆಯಲ್ಲಿ ಸೇರಿಸಿ ಉದ್ಯೋಗಿಗಳಿಗೆ ಅರಿವು ಮೂಡಿಸಿದರೆ ಕಳಂಕವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಪ್ರಾರಂಭಿಸಲು ಸಹಾಯವಾಗುತ್ತದೆ.
  • ಅಗತ್ಯವಿದ್ದಾಗ, ದೂರವಾಣಿಯ ಮೂಲಕ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಲು ವ್ಯವಸ್ಥೆ ಮಾಡಬೇಕು.
  • ತುರ್ತು ಪರಿಸ್ಥಿತಿಯಲ್ಲಿ ಮಾನಸಿಕ ಸಮಸ್ಯೆಗೆ ಸಹಾಯ ಪಡೆಯಲು ಅಗತ್ಯ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯನ್ನು ಪೋಸ್ಟರ್ ಅಥವಾ ಸೂಚನಾ ಪತ್ರಗಳಲ್ಲಿ ಪ್ರಕಟಿಸಿ ಅಂಟಿಸಬೇಕು. ಉದ್ಯೋಗಿಗಳ ಗೌಪ್ಯತೆ ಕಾಪಾಡಲು ಭರವಸೆ ನೀಡಬೇಕು.    
  • ಎಲ್ಲಾ ಉದ್ಯೋಗಿಗಳಿಗೂ (ಮ್ಯಾನೇಜ್ಮೆಂಟ್ ಸೇರಿ ) ಮಾನಸಿಕ ಆರೋಗ್ಯ ಮತ್ತು ಅದರ ಸೂಕ್ಷ್ಮತೆಗಳ ಕುರಿತು ಅರಿವು ಮೂಡಿಸಬೇಕು. ಇದರಿಂದ ಮಾನಸಿಕ ಸಮಸ್ಯೆ ಇರುವ ಉದ್ಯೋಗಿಯೊಂದಿಗೆ ಎಲ್ಲರೂ ಸೂಕ್ಷ್ಮವಾಗಿ ವ್ಯವಹರಿಸುತ್ತಾರೆ. 

ಬೆಂಗಳೂರಿನ ಆಪ್ತ ಸಮಾಲೋಚಕರಾದ ಮೌಲಿಕ ಶರ್ಮರವರ ಅಭಿಪ್ರಾಯದಂತೆ, ಸಂಸ್ಥೆಯ ಕಾರ್ಯನೀತಿಯಲ್ಲಿ ಉದ್ಯೋಗಿಯ ಮಾನಸಿಕ ಯೋಗಕ್ಷೇಮ ಕುರಿತು ಪ್ರಾಮುಖ್ಯತೆ ನೀಡಿದಾಗ, ಮೇಲೆ ಸೂಚಿಸಿದ ಅಂಶಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. “ಮ್ಯಾನೇಜರ್ ಮತ್ತು ಸಹೋದ್ಯೋಗಿಗಳಿಗೆ ಮಾನಸಿಕ ಅಸ್ವಸ್ಥತೆ ಮತ್ತು ಅದರ ಲಕ್ಷಣ ಕುರಿತು ತರಬೇತಿ ನೀಡುವುದು, ವ್ಯಕ್ತಿಯೊಂದಿಗೆ ಸಹಜವಾಗಿ ವರ್ತಿಸುವುದು, ಇತ್ಯಾದಿ ವಿಷಯಗಳ ಕಡೆ ಗಮನ ನೀಡಿದಾಗ ಮಾನಸಿಕ ಆರೋಗ್ಯ ಬಗ್ಗೆ ಹೆಚ್ಚಿನ  ಅರಿವು ಉಂಟಾಗುತ್ತದೆ.