ಸಮಾಜದ ಸಿದ್ಧಮಾದರಿಯ ಚಿಂತನೆಯೇ ಪುರುಷರ ನಿರ್ಭಾವುಕತೆಗೆ ಕಾರಣ

ಸಮಾಜದ ಸಿದ್ಧಮಾದರಿಯ ಚಿಂತನೆಯೇ ಪುರುಷರ ನಿರ್ಭಾವುಕತೆಗೆ ಕಾರಣ

ನಾವು ಮಾನಸಿಕ ಸ್ವಾಸ್ಥ್ಯದ ಬಗ್ಗೆ ಚರ್ಚಿಸುವಾಗ, ದುರ್ಬಲವೆಂದು ಪರಿಗಣಿಸಲ್ಪಡುವ ವರ್ಗದವರ ಮೇಲೆ ಹೆಚ್ಚಿನ ಗಮನ ಹರಿಸುವುದನ್ನು ನೋಡಿದ್ದೇವೆ. ಮಹಿಳೆಯರು (ಮಹಿಳೆಯರನ್ನು ದುರ್ಬಲರೆಂಬ ಭಾವನೆ ಪುರುಷಪ್ರಧಾನ ಸಮಾಜದಲ್ಲಿ ಇರುವುದರಿಂದ), ಅಸಹಜ ಮನಸ್ಥಿತಿಯವರು, ಅಂಗವಿಕಲರು, ತಳಸಮುದಾಯದವರು, ಶೋಷಿತರೇ ಮೊದಲಾದ ವರ್ಗಗಳ ಬಗ್ಗೆ ವಿಶೇಷ ಕಾಳಜಿಯಿಂದ ಚರ್ಚಿಸುತ್ತೇವೆ. ಈ ವರ್ಗಗಳಲ್ಲಿ ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಮಾನಸಿಕ ಸಮಸ್ಯೆಗಳಿಗಿರುವ ಕೆಲವು ಸಹಜವಾದ ಕಾರಣಗಳನ್ನು ಬದಿಗಿರಿಸಿ ನೋಡಿದರೆ, ಖಿನ್ನತೆಯ ಸಮಸ್ಯೆಗಳ ಮೂಲ ಆನುವಂಶಿಕತೆಯಲ್ಲಿ ಇರುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರು ಸಂಪನ್ಮೂಲಗಳ ಮತ್ತು ಅವಕಾಶಗಳ ಮೇಲೆ ನಿಯಂತ್ರಣ ಹೊಂದಿದ್ದು, ವಿಶೇಷ ಸ್ಥಾನಮಾನಗಳನ್ನು ಹೊಂದಿರುತ್ತಾರೆ. ಆದ್ದರಿಂದಲೇ ಪುರುಷರಿಗೆ ಸಮಾಜದಲ್ಲಿ ಗಣನೀಯ ಪಾತ್ರ ವಹಿಸಲಾಗಿದೆ. ಆದ್ದರಿಂದ ಇವರಲ್ಲಿ ಮಾನಸಿಕ ಸಮಸ್ಯೆಗಳಿಗೆ ಆಸ್ಪದವಿಲ್ಲ ಎಂದು ಹೇಳಲಾಗುತ್ತದೆ.

ಹಾಗೆಯೇ ದುರ್ಬಲ ಸಮುದಾಯಗಳು ಅಧಿಕಾರ ಹೊಂದಿರುವ ನಿರ್ದಿಷ್ಟ ಸಮುದಾಯದ (ಅಥವಾ ಪುರುಷರ) ಕಾರಣದಿಂದ ಅಭದ್ರತೆ, ಉದ್ವೇಗ, ಭಯ, ಮಾನಸಿಕ ಒತ್ತಡ ಮೊದಲಾದವನ್ನು ಅನುಭವಿಸುತ್ತವೆ.

‘ಪುರುಷ’ ಪರಿಕಲ್ಪನೆ

ಪುರುಷರನ್ನು, ರೂಢಿಗತ ನಂಬಿಕೆಯಂತೆ ಬಲಿಷ್ಠರೂ. ಶಕ್ತಿವಂತರೂ, ಸಬಲರೂ, ವಿದ್ಯೆ – ಬುದ್ಧಿಗಳನ್ನು ಹೊಂದಿದವರೂ ಎಂದು ಪರಿಗಣಿಸಿ ಈ ಚರ್ಚೆಯನ್ನು ಮುಂದುವರಿಸೋಣ.

ಬಹುತೇಕ ಸಾಮಾಜಿಕ ನಿಯಮಗಳು ಪುರುಷರ ಪರವಾಗಿಯೇ ಇರುತ್ತವೆ. ಅವರಿಗೆ ಅನುಕೂಲಕರವಾಗಿಯೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಅವರಿಗೆ ಮಾನಸಿಕ ಕ್ಷೋಭೆ ಉಂಟಾಗಲು ಸಾಧ್ಯವಿಲ್ಲ ಎಂದಲ್ಲ. ಕೆಲವು ಪುರುಷರು ವೈಯಕ್ತಿಕವಾಗಿ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುತ್ತಾರೆ. ಆದರೆ ಒಟ್ಟು ಸಮಾಜದ ಚಿಂತನೆಯಲ್ಲಿ ಸಮಗ್ರ ಬದಲಾವಣೆಯನ್ನು ತರಲು ಅವರಿಂದ ಸಾಧ್ಯವಾಗುವುದಿಲ್ಲ.

ಕಳೆದ ಕೆಲವು ವರ್ಷಗಳಿಂದ ‘ಆಲ್ಫಾ ಮೆನ್’, ‘ಬೀಟಾ ಮೆನ್’ ಪರಿಕಲ್ಪನೆಗಳು ಸಮಾಜದಲ್ಲಿ ಚಾಲ್ತಿಯಲ್ಲಿವೆ. ಅಮೆರಿಕದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರದಲ್ಲಿ ಈ ಚಿಂತನೆ ಹೆಚ್ಚು ಚರ್ಚೆಯಲ್ಲಿದೆ. ಈ ಎರಡೂ ಬಗೆಯ ಪುರುಷರಲ್ಲಿ ಸಂರ್ಷಗಳಿವೆ.

ಆಲ್ಫಾ ಮೆನ್ ತಮ್ಮ ಕಾರ್ಯ ಕ್ಷಮತೆಯನ್ನು ಕಾಯ್ದಿಟ್ಟುಕೊಳ್ಳುವ ಸವಾಲು, ತೀವ್ರ ಸಾಮಾಜಿಕ ಪೈಪೋಟಿ, ನಿರೀಕ್ಷೆಗಳು ಮತ್ತು ಹೊಗಳಿಕೆಗೆ ತಕ್ಕಂತೆ ತಮ್ಮ ಅಸ್ತಿತ್ವವನ್ನು ನಿಭಾಯಿಸಿಕೊಳ್ಳುವ ಒತ್ತಡದಲ್ಲಿ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಾರೆ.

ಬೀಟಾ ಮೆನ್ ಸಾಮಾಜಿಕ ಅವ್ಯವಸ್ಥೆ, ಪಕ್ಷಪಾತ, ಸಂಗಾತಿಯೊಡನೆ ಸಂಬಂಧ ಮೊದಲಾದ ಕಾರಣಗಳಿಂದ ತಪ್ಪಿಹೋದ ಅವಕಾಶಗಳಿಗಾಗಿ ಪರಿತಪಿಸುತ್ತಾ ಇರುತ್ತಾರೆ. ಇಂಥವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದುರ್ಬಲ ಮನಸ್ಥಿತಿಯ ಪುರುಷರಲ್ಲಿ ಈ ಖಿನ್ನತೆಯು ಕ್ರೌರ್ಯ, ದ್ವೇಷ, ಹಿಂಸೆ ಮೊದಲಾದ ಭಾವನೆಗಳನ್ನು ಮೂಡಿಸುತ್ತದೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಯಾರೂ ಜಯಶಾಲಿಗಳಲ್ಲ.

ಪುರುಷಪ್ರಾಧಾನ್ಯತೆಯು ಮಹಿಳೆಯರು, ದುರ್ಬಲರು ಮತ್ತಿತರ ಮೇಲೆ ಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಅಷ್ಟು ಮಾತ್ರವಲ್ಲ; ಪುರುಷಪ್ರಾಧಾನ್ಯ ಚಿಂತನೆಯು ನಿಷ್ಠುರವೂ ಕಠಿಣವೂ ಆಗಿದ್ದು, ಸ್ವತಃ ಪುರುಷರ ಮೇಲೂ ಇದು ಪರಿಣಾಮ ಬೀರುತ್ತದೆ.

ಏಕೆಂದರೆ, ಈ ಚಿಂತನೆಯು ಪುರುಷರಿಂದಲೂ ಕೆಲವು ನಡವಳಿಕೆಯ ಅಘೋಷಿತ ನಿಯಮಗಳನ್ನು ಹೇರಿದೆ.

ಪುರುಷರ ಮೇಲೆ ಪರಿಣಾಮ ಬೀರುವ ಪುರುಷ ಪ್ರಾಧಾನ್ಯತೆಯ ಕೆಲವು ನಿಯಮಗಳು ಹೀಗಿವೆ:

  • “ದುರ್ಬಲರಲ್ಲದವರು, ಧೈರ್ಯಶಾಲಿಗಳು ಮಾತ್ರವೇ ಪುರುಷರು” ಎನ್ನುವುದು ಪೌರುಷದ ನಿರ್ವಚನೆ
  • ಪುರುಷರು ಅಳುವಂತಿಲ್ಲ; ಭಾವುಕತೆಯಿಂದ ವರ್ತಿಸುವುದು ಪುರುಷರ ಲಕ್ಷಣವಲ್ಲ, ಇವರು ಸದಾ ಕಾಠಿಣ್ಯವನ್ನೇ ತೋರಬೇಕು
  • ತಾರ್ಕಿಕ ಚಿಂತನೆ, ವಿವೇಚನೆ, ಸಮಾಧಾನ – ಇವು ಪುರುಷರನ್ನು ರೂಪಿಸುವ ಗುಣಗಳು
  • ಭಾವನೆಗಳನ್ನು ಹಂಚಿಕೊಳ್ಳದಿರುವುದು : ತಮ್ಮಭಾವನೆಗಳನ್ನು ವ್ಯಕ್ತಪಡಿಸುವುದು,ಇತರರೊಂದಿಗೆ ಹೇಳಿಕೊಳ್ಳುವುದು ಪುರುಷತ್ವದ ಲಕ್ಷಣವಲ್ಲ.
  • ಪ್ರೀತಿಯಿಂದ ವರ್ತಿಸುವಂತಿಲ್ಲ : ಬಿಗುವಾಗಿದ್ದು, ಎಲ್ಲರೊಡನೆ ಸಮಾನ ಅಂತರವನ್ನು ಕಾಯ್ದುಕೊಳ್ಳಬೇಕು.

ಇಂತಹ ಅಲಿಖಿತ ನಿಯಮಗಳು ಪುರುಷರನ್ನು ಸಾಮಾಜಿಕವಾಗಿ ತಮ್ಮ ಭಾವನೆಗಳನ್ನು, ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸದಂತೆ, ತಮ್ಮ ಪ್ರೀತಿ-ವಾತ್ಸಲ್ಯಗಳನ್ನು ತೋರ್ಪಡಿಸದಂತೆ, ಸಾಂಪ್ರದಾಯಿಕ ನಡಾವಳಿಯನ್ನೇ ಮುಂದುವರೆಸಿಕೊಂಡು ಹೋಗುವಂತೆ, ತಮ್ಮಭಾವನೆಗಳನ್ನು ಮರೆಮಾಚಲು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಂತೆ ಮತ್ತು ಗಡಸುತನದಿಂದ ತನ್ನ ಪುರುಷತ್ವವನ್ನು ಸಾಬೀತುಪಡಿಸುವಂತೆ ಪ್ರೇರೇಪಿಸುತ್ತವೆ.

ಪುರುಷತ್ವ ಪ್ರದರ್ಶನಕ್ಕೆ ಬೆದರಿಸುವುದೂ ಒಂದು ವಿಧಾನ

ಪರಸ್ಪರ ಮುಖಾಮುಖಿಯಾದಾಗ ಕಂಡು ಬರುವ ಈ ಪುರುಷತ್ವ ಪ್ರದರ್ಶನವು ಅಪಾಯಕಾರಿ. ಯಾವುದೇ ಸಂದರ್ಭದಲ್ಲಿ, ಪುರುಷತ್ವವನ್ನು ತೋರ್ಪಡಿಸಲು ಬಳಸುವ ಯಾವುದೇ ರೀತಿಯ ಬೆದರಿಕೆಗಳು ಮತ್ತು ಅಸಹಾಯಕರನ್ನು, ದುರ್ಬಲರನ್ನು ಹೆದರಿಸುವ ತಂತ್ರಗಳು ತುಂಬಾ ಅಪಾಯಕಾರಿಯಾಗಿರುತ್ತವೆ, ಅಷ್ಟೇ ಹಿಂಸಾತ್ಮಕವಾಗಿಯೂ ಪರಿಣಮಿಸುತ್ತವೆ. ಮಹಿಳೆಯರ, ತೃತೀಯ ಲಿಂಗಿಗಳ ಮತ್ತು ಉದಾರ ಚಿಂತಕರ ಮೇಲೂ ಬೆದರಿಕೆ ಹಾಕುವ ಮೂಲಕ ಕೆಲವರು ತಮ್ಮ ‘ಪೌರುಷ’ ಪ್ರಕಟಿಸುತ್ತಾರೆ.

ತಮ್ಮ ಪೌರುಷದ ಬಗ್ಗೆ ಅಹಂಕಾರವುಳ್ಳವರು ಮಾತ್ರವಲ್ಲ, ಸಲಿಂಗ ಕಾಮಿ ಪುರುಷರು ಕೂಡಾ ಕೆಲವೊಮ್ಮೆ ಹಿಂಸೆಗೆ ಇಳಿಯುತ್ತಾರೆ. ಸಿಂಗಪೂರ್’ನಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಸಣ್ಣಮಕ್ಕಳಿಗೆ ತಮ್ಮ ಪುರುಷತ್ವವನ್ನು ತೋರ್ಪಡಿಸುವಂತೆ ಮತ್ತು ತಾವು ಬಲಶಾಲಿಗಳೆಂದು ಬಿಂಬಿಸುವಂತೆ ಬೆದರಿಸಲಾಗುತ್ತದೆ. ಇದು ಒಂದು ಕೆಟ್ಟದಾದ “ಬೆದರಿಕೆಯ ಪಿರಮಿಡ್” ನಿರ್ಮಾಣಕ್ಕೆ ಕಾರಣವಾಗಿದೆ.

ಉನ್ನತ ಸ್ಥಾನದಲ್ಲಿರುವ, ಪುರುಷತ್ವ ಪ್ರದರ್ಶಕರ ನಡವಳಿಕೆಗಳು ಬೆದರಿಕೆಯ ಭಾಗಗಳೇ ಆಗಿರುತ್ತವೆ. ಶಾಲೆಗಳಲ್ಲಿ ಕೆಲವು ಫಟಿಂಗರು ಮತ್ತು ಸಲಿಂಗಕಾಮಿಗಳಿಂದ ಬೆದರಿಕೆಗಳು ಬರುವುದುಂಟು.

ಇನ್ನು, ಪುರುಷರು ತಮ್ಮ ದೌರ್ಬಲ್ಯವನ್ನಾಗಲೀ ಪೌರುಷವನ್ನಾಗಲೀ ತೋರ್ಪಡಿಸಿಕೊಳ್ಳಲು ನಿರ್ದಿಷ್ಟ ಮಾನದಂಡಗಳಿವೆಯೇ? ನಿರ್ದಿಷ್ಟ ಮಾರ್ಗಗಳಿವೆಯೇ? ಈಗಲೂ ಬೆದರಿಕೆಯ ಪೌರುಷ ಪ್ರದರ್ಶನ ಚಾಲ್ತಿಯಲ್ಲಿದೆಯೇ? ಇದ್ದರೆ, ಯಾವ ಪ್ರಮಾಣದಲ್ಲಿ? – ಎನ್ನುವುದು ಪ್ರತ್ಯೇಕ ಚರ್ಚೆ.

ಮಾನಸಿಕ ಸಮಸ್ಯೆ ಒಂದು ದೌರ್ಬಲ್ಯ :

ಪುರುಷಪ್ರಧಾನ ಚಿಂತನೆಯಿಂದಾಗಿಯೇ ಪುರುಷರಲ್ಲಿ ಕೆಲವು ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ. ಈ ಚಿಂತನೆಯ ನಿಯಮಗಳನ್ನು ಪಾಲಿಸಲೆಂದೇ ಪುರುಷರು ತಮ್ಮ ನೈಜ ಮನಸ್ಥಿತಿಯ ನಿರಾಕರಣೆಯಲ್ಲಿ ತೊಡಗುತ್ತಾರೆ. ಮುಂದಿನ ಸಮಸ್ಯೆಗಳಿಗೆ ಈ ನಿರಾಕರಣೆಯೇ ಕಾರಣವಾಗುತ್ತದೆ.

ಪುರುಷರು ತಮ್ಮ ಪೌರುಷವನ್ನು ಸಾಬೀತುಮಾಡುವ ಮರ್ಜಿಗೆ ಬಿದ್ದು ತಮ್ಮ ನೈಜ ಭಾವನೆಗಳನ್ನು ಮರೆಮಾಚುತ್ತಾರೆ. ಅವರು ಭಾವುಕತೆಯನ್ನು, ಭಾವನೆಗಳ ಅಭಿವ್ಯಕ್ತಿಯನ್ನು ದೌರ್ಬಲ್ಯವೆಂದು ಭಾವಿಸುತ್ತಾರೆ. ಆದ್ದರಿಂದಲೇ ಅವರು ತಮ್ಮ ಮೇಲೆ ತಾವು ನಿರ್ಬಂಧ ಹೇರಿಕೊಳ್ಳುತ್ತಾರೆ.

ಸಾಂಧರ್ಭಿಕವಾಗಿ, ಬಹಳಷ್ಟು ಪುರುಷರು ಕ್ರೂರಿಗಳಾಗುತ್ತಾರೆ. ಏಕೆಂದರೆ ಕೋಪವು ಪುರುಷತ್ವದ ಮುಖ್ಯ ಭಾಗವಾಗಿದೆ. ತಮ್ಮ ವೈಫಲ್ಯದ ಕಾರಣದಿಂದಾಗಿ ಮತ್ತು ಎಲ್ಲಾ ಸಮಸ್ಯೆಗಳಿಗೂ ತಾವೇ ಜವಾಬ್ದಾರರು ಎಂಬ ಭಾವನೆಯಿಂದಾಗಿ ಒಂದೋ ಇತರರನ್ನು ಹಿಂಸಿಸುತ್ತಾರೆ; ಇಲ್ಲವೇ ಸ್ವತಃ ತಾವೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಇನ್ನು ಕೆಲವರು ಮಾನಸಿಕವಾಗಿ ಎಷ್ಟೇ ನೊಂದಿದ್ದರೂ ತಮ್ಮ ನೋವನ್ನು ಸುಮ್ಮನೆ ಅನುಭವಿಸುತ್ತ, ಯಾವುದೇ ರೀತಿಯ ನೆರವು ಪಡೆಯದೆ ಜೀವನ ಸಾಗಿಸುತ್ತಿರುತ್ತಾರೆ.

ನಾವೇನಾದರೂ ಲಿಂಗ ತಾರತಮ್ಯರಹಿತ ಪ್ರಪಂಚದಲ್ಲಿ ಜೀವಿಸಿದ್ದರೆ ?

ಪುರುಷಪ್ರಾಧಾನ್ಯತೆಯ ದುಷ್ಪರಿಣಾಮಗಳನ್ನು ಅರಿತು ಜಾಗೃತರಾಗಿರುವ, ಪ್ರಪಂಚಾದ್ಯಂತ ಇರುವ ಕೆಲವು ಉದಾತ್ತ ಮನಸ್ಥಿತಿಯ ಸಮುದಾಯಗಳು ಲಿಂಗಬೇಧವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿವೆ. ಲಿಂಗಸಮಾನತೆಯ ಕುರಿತಾಗಿ ಶಿಕ್ಷಣನೀಡುತ್ತಿವೆ, ಸಹಾನುಭೂತಿತೋರುತ್ತಿವೆ. ಮತ್ತು ಲಿಂಗಸಮಾನತೆಯ ಮೌಲ್ಯಗಳನ್ನು ಅರ್ಥ ಮಾಡಿಸುವ ಪ್ರಯತ್ನದಲ್ಲಿವೆ. ಯೂರೋಪ್, ಕೆನಡಾ ಇನ್ನಿತರ ದೇಶಗಳ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಇದರ ಬಗ್ಗೆ ಸೂಕ್ತ ಅರಿವು ಮೂಡಿಸುತ್ತಿವೆ. ಈ ದೇಶಗಳಲ್ಲಿನ ಕಾನೂನು ವ್ಯವಸ್ಥೆಯೂ ಸಹ ಸೂಕ್ತ ಕಾನೂನನ್ನು ರೂಪಿಸುವ ಮೂಲಕ ಅಸಮಾನತೆ ಮತ್ತು ಲಿಂಗ ತಾರತಮ್ಯವನ್ನು ಹೋಗಲಾಡಿಸಲು ದಿಟ್ಟ ಹೆಜ್ಜೆಯಿರಿಸಿದೆ. ಈ ಬದಲಾವಣೆಗೆ ಮುನ್ನ ನಡೆಸಲಾಗಿದ್ದ ಸಮೀಕ್ಷೆಗಳು, ಭಿನ್ನಲಿಂಗ ಮತ್ತು ಭಿನ್ನಸಮುದಾಯದ ಯುವಜನರಲ್ಲಿ ಮಾನಸಿಕ ಸಮಸ್ಯೆಗಳ ಅಂತರ ಹೆಚ್ಚಾಗಿದ್ದು, ಸಮಾನತೆಯ ಕಾನೂನಿನಂದಾಗಿ ಇದು ಕಡಿಮೆಯಾಗಲಿವೆಯೆಂದು ತಿಳಿಸಿದ್ದವು.

ಸಮಾಜದಲ್ಲಿರುವ ಈ ಲಿಂಗತಾರತಮ್ಯವನ್ನು ನಿರ್ಮೂಲನೆಗೊಳಿಸುವುದು ಮೂಲಭೂತ ಆಗ್ರಹವಾಗಿರಬೇಕು. ಜನರು ಲಿಂಗಪ್ರಾಧಾನ್ಯತೆಯನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ?ಸಮಾಜದಲ್ಲಿ, ಜನರನ್ನು ಪಿಂಕ್/ಬ್ಲೂ ಬಣ್ಣಗಳಿಂದ ಪ್ರತ್ಯೇಕಿಸಿ ಏಕೆ ಗುರುತಿಸಬೇಕು? ಉಡುಗೆ-ತೊಡುಗೆಗಳಿಂದ, ಕೇಶವಿನ್ಯಾಸದಿಂದ/ಕಾಲಿಗೆ ಧರಿಸುವ ಚಪ್ಪಲಿಗಳಿಂದ ಏಕೆ ಪ್ರತ್ಯೇಕಿಸಬೇಕು? ತಮ್ಮಭಾವನೆಗಳನ್ನು ವ್ಯಕ್ತಪಡಿಸಲು ಯಾವುದೇ ಅಡೆತಡೆಗಳಿಲ್ಲದಿದ್ದರೆ ಏನಾಗುತ್ತದೆ? ಯಾವುದೇ ಲಿಂಗಬೇಧಗಳಿಲ್ಲದ ಸಮಾಜದಲ್ಲಿ ಮಾನಸಿಕ ಸಮಸ್ಯೆಗಳು ಕಡಿಮೆಯಿರುತ್ತದೆಯೇ? ಅಂತಹ ಸಮುದಾಯದಲ್ಲಿ ಲೈಂಗಿಕಕಿರುಕುಳ ಅಥವಾ ದೌರ್ಜನ್ಯದ ಪ್ರಕರಣಗಳು ಅಲ್ಪಪ್ರಮಾಣದಲ್ಲಿರುತ್ತದೆಯೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡಾ ಒಂದು ಪ್ರಮುಖ ಪ್ರಕ್ರಿಯೆ.

ಜೊತೆಗೆ; ಇತ್ತೀಚಿನ ದಿನಗಳಲ್ಲಿ ಕೆಲವು ಸಮುದಾಯಗಳು ಲಿಂಗತಾರತಮ್ಯವನ್ನು ಹೋಗಲಾಡಿಸಲು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಒಗ್ಗಟ್ಟಾಗಿ ಕೆಲವು ಪ್ರಯೋಗಗಳನ್ನು ನಡೆಸುತ್ತಿವೆ. ಸ್ವೀಡನ್, ನಾರ್ವೆ, ಡೆನ್ಮಾರ್ಕ್ ಮುಂತಾದ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಲಿಂಗಪ್ರಧಾನವಾದ ಕೆಲವು ಪದಗಳನ್ನು, ಹೆಸರಿಡುವಾಗ ಅಥವಾ ಶಾಲೆಗೆ ಸೇರಿಸುವಾಗ ಲಿಂಗ ಗುರುತಿಸುವುದರ ವಿರುದ್ಧ ಚಳವಳಿಗಳನ್ನು ನಡೆಸಲಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಜನರು ಲಿಂಗ ಪ್ರಾಧಾನ್ಯತೆಯ ವ್ಯವಸ್ಥೆಯಿಂದ ಹೊರಬರುತ್ತಾರೆಯೇ, ಭಿನ್ನಲಿಂಗಿಗಳ ನಡುವೆ ಇರುವ ಮಹಾಗೋಡೆ ಬಿದ್ದು ಹೋಗುತ್ತದೆಯೇ? ಮತ್ತು, ಇದರಿಂದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿರುವ ವ್ಯವಸ್ಥೆಗಳಲ್ಲಿ ಬದಲಾವಣೆಯಾಗುತ್ತದೆಯೇ? ಕಾದು ನೋಡಬೇಕು.

ಆಕರಗಳು :

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org