ಸಮಾಜ ಮತ್ತು ಮಾನಸಿಕ ಆರೋಗ್ಯ
ಜಯಂತ ಕಾಯ್ಕಿಣಿ ಅವರಿಂದ ʼಅಂಚುʼ ಕವಿತಾ ವಾಚನ
ʼಅಂಚುʼ
ಮರುಳನಾಗುವ ಒಂದು ದಿನ ಮುಂಚೆ ಎಲ್ಲರನ್ನೂ ಕಂಡು ಹೋಗಿದ್ದ
ಯಾರಿಗೂ ಪುರುಸೊತ್ತಿರಲಿಲ್ಲ ಅವನ ಕಂಗಳನ್ನು ನೋಡಲು
ಅವನ ದನಿ ಬೇರೆ ದೇಹದಿಂದ ಬಂದಂತಿತ್ತು
ಅವನ ನಗುವು ಕೆಲಸ ಮಾಡದ ತಾರು ಯಂತ್ರದ ಸಂದೇಶದಂತಿತ್ತು
ಎಂದೆಲ್ಲ ಈಗ ಆಡಿಕೊಳ್ಳಬಹುದು
ಆದರೆ ಆತ ಬಂದಿದ್ದಾಗ ಬರೇ ಕಡೆಗಣ್ಣಿನಿಂದ ಆವನನ್ನು ನೋಡಿ
ನಾವೆಲ್ಲಾ ಒಂದಿಂಚು ಹಿಂದೆ ಉಳಿದೆವಲ್ಲ
ಬೆಂಗಡೆ ಮೆಲ್ಲಗವ ಇಳಿದು ಹೋದದ್ದು ತಿಳಿದು ಸುಮ್ಮನಿದ್ದೆವಲ್ಲ
ಅವನಿಗೆ ಬೇಕಾಗಿದ್ದ ಎಳೆ ಅವನಿಗೆ ಸಿಕ್ಕಿದ್ದಿದ್ದರೆ
ದಾಟುವ ಬೀದಿ ಬದಿಯಲ್ಲೇ ಮೊಮ್ಮಗುವಿನ ಪುಟ್ಟ ಮುದ್ದಾದ ಕುಂಡೆ ತೊಳೆದು ಸೆರಗಿನಿಂದ ಒರೆಸುತ್ತಿರುವ ಅಜ್ಜಿಯ ಹಿಗ್ಗಿನ ನೋಟವನ್ನಾತ ವಿನಿಮಯ ಮಾಡಿಕೊಂಡಿದ್ದರೆ
ಅಥವಾ
ಬಣ ಬಣ ಮಧ್ಯಾಹ್ನ ರಸ್ತೆ ಮಧ್ಯ ಹೊತ್ತ ಹೊರೆಗೆ ಅಲ್ಲಾಡುತ್ತ ನಿಂತ ತರುಣನ ತಲೆ ಹಿಡಿದು ಅವನ ಕಣ್ಣಲ್ಲಿ ಕಣ್ಣಿಟ್ಟು ಉಫ್ ಊದುತ್ತ ಜಾರುವ ಕಣ್ಣಾಲಿಯಿಂದ ಕಸ ತೆಗೆಯುತ್ತಿರುವ ಲಂಬಾಣಿ ಹುಡುಗಿಯ ಹಳದಿ ದಾವಣಿ ಸುತ್ತಿದ ನೀಳ ಬೆರಳಿನ ತುದಿಯ ಅಕ್ಕರೆಯನ್ನು ಆತ ನಿಲುಕಿದ್ದರೆ
ಉಳಿಯಬಹುದಾಗಿತ್ತ ಈಚೆ
ಉಳಿಯಬಹುದಾಗಿತ್ತ ಈಚೆ
- ಜಯಂತ ಕಾಯ್ಕಿಣಿ